– ಪಬ್ಲಿಕ್ ಟಿವಿ ವರದಿಯಿಂದ ಮತ್ತೆ ಆಸ್ಪತ್ರೆ ಸೇರಿದ ರೋಗಿಗಳು
ಮಂಗಳೂರು: ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ನಾಲ್ಕು ಮಂದಿ ರೋಗಿಗಳು ಬೀದಿ ಪಾಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಉಪ್ಪಿನಂಗಡಿಯ ರಘುರಾಮ, ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಬೀದಿಯಲ್ಲಿ ದಿಕ್ಕು ತೋಚದಂತೆ ಇರುವ ರೋಗಿಗಳು. ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೆನ್ಲಾಕ್ನಲ್ಲಿ ಮೂರು ತಿಂಗಳ ಹಿಂದೆ ನಾಲ್ವರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಂತರ ವೆನ್ಲಾಕ್ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾದ ಹಿನ್ನೆಲೆ ಅಲ್ಲಿನ ರೋಗಿಗಳನ್ನು ಬೇರೆ ಬೇರೆ ಖಾಸಗಿ ಆಸ್ಪತ್ರೆ ಶಿಫ್ಟ್ ಮಾಡಲಾಗಿತ್ತು. ನಿನ್ನೆಯವರೆಗೆ ನಾಲ್ವರು ರೋಗಿಗಳು ಮಂಗಳೂರು ಹೊರ ವಲಯ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದ್ದಕ್ಕಿದ್ದಂತೆ ಆಸ್ಪತ್ರೆಯವರು ರೋಗಿಗಳನ್ನು ರಸ್ತೆಯಲ್ಲಿ ತಂದು ಬಿಟ್ಟ ಹೋಗಿದ್ದಾರೆ. ಹೀಗಾಗಿ ಹಿರಿಯ ಜೀವಗಳು ಮಳೆ, ಚಳಿಯಲ್ಲಿ ಮಾರುಕಟ್ಟೆ ಜಗಲಿಯಲ್ಲಿ ಕುಳಿತ್ತಿದ್ದು, ಸ್ಥಳೀಯ ರಿಕ್ಷಾ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳಿಂದ ಊಟ, ನೀರಿನ ವ್ಯವಸ್ಥೆ ಸದ್ಯಕ್ಕೆ ಮಾಡಿದ್ದಾರೆ. ನಾಲ್ವರು ರೋಗಿಗಳನ್ನು ತಮ್ಮ ಮನೆಯಿಂದ ಹೊರ ಹಾಕಿದ್ದು, ಈಗ ಅನಾರೋಗ್ಯದಿಂದ ಇರುವ ರೋಗಿಗಳನ್ನು ಆಸ್ಪತ್ರೆಯವರು ಬಿಟ್ಟು ಹೋಗಿದ್ದಾರೆ. ಹೀಗಾಗಿ ಮಾರುಕಟ್ಟೆ ಜಗಲಿಯಲ್ಲಿ ಕುಳಿತು ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.
ಏಕಾಏಕಿ ವಯಸ್ಸಾದ ಯಾರು ಇಲ್ಲದ ಹಿರಿಯ ಜೀವಗಳನ್ನು ಬೀದಿಯಲ್ಲಿ ಬಿಟ್ಟು ಹೋಗಿದ್ದರ ವಿರುದ್ಧ ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿ, ಆದಷ್ಟು ಶೀಘ್ರವಾಗಿ ಇವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ವರದಿ ಮಾಡಿದ್ದು ಬಳಿಕ ಜಿಲ್ಲಾಡಳಿತ ಎಚ್ಚೆತ್ತು ಅಧಿಕಾರಿಗಳು ಸ್ಥಳಕ್ಕಾಗಮಿಸಿ ಎಲ್ಲಾ ನಾಲ್ಕು ರೋಗಿಗಳನ್ನು ಜಿಲ್ಲಾ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ.