ನವದೆಹಲಿ: ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು. ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿದಿಟ್ಟುಕೊಳ್ಳಲು ಆರ್ ಎಸ್ಎಸ್ ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ವೆಬಿನಾರ್ನಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯ ಹಾಗೂ ಭಾರತದ ಮಾಜಿ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರೊಂದಿಗೆ ಮಾತನಾಡಿರುವ ಅವರು, ಆರ್ಎಸ್ಎಸ್ ಭಾರತದ ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿದಿಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
LIVE: My interaction with Prof Kaushik Basu @Cornell University https://t.co/GfErZtSpW2
— Rahul Gandhi (@RahulGandhi) March 2, 2021
1975ರಲ್ಲಿ ಮಾಜಿ ಪ್ರಧಾನಿ ಹಾಗೂ ನನ್ನ ಅಜ್ಜಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು, ತುರ್ತು ಪರಿಸ್ಥಿತಿ ಹೇರಿದ್ದು ಖಂಡಿತವಾಗಿಯೂ ಒಂದು ದೊಡ್ಡ ತಪ್ಪು. ಇದನ್ನು ನನ್ನ ಅಜ್ಜಿ ಸಹ ಹೇಳಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ಘಟನೆಗಳು ಸಹ ತಪ್ಪು. ಕಾಂಗ್ರೆಸ್ ಪಕ್ಷ ದೇಶದ ಸಾಂಸ್ಥಿಕ ಚೌಕಟ್ಟನ್ನು ಹಿಡಿಯಲು ಯತ್ನಿಸಿದ ಕಾರಣ ಆಗ ಮೂಲಭುತ ವ್ಯತ್ಯಾಸವಿತ್ತು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಯಾವುದೇ ಸಮಯದಲ್ಲಿ ಭಾರತದ ಸಾಂಸ್ಥಿಕ ಚೌಕಟ್ಟನ್ನು ಹಿಡಿಯಲು ಯತ್ನಿಸಿರಲಿಲ್ಲ. ನಮ್ಮ ಪಕ್ಷಕ್ಕೆ ಆ ಸಾಮಥ್ರ್ಯವೂ ಇಲ್ಲ. ನಮ್ಮ ವ್ಯವಸ್ಥೆ ಇದನ್ನು ಅನುಮತಿಸುವುದಿಲ್ಲ. ನಾವು ಬಯಸಿದರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಆರ್ ಎಸ್ಎಸ್ ವ್ಯವಸ್ಥೆ ಮೂಲಭೂತವಾಗಿ ಭಿನ್ನವಾಗಿದೆ. ಹೀಗಾಗಿ ನಾವು ಚುನಾವಣೆಯಲ್ಲಿ ಬಿಜೆಪಿ ಸೋಲಿಸಿದರೂ ಸಾಂಸ್ಥಿಕ ರಚನೆಯಲ್ಲಿ ಅವರ ಜನರನ್ನು ತೊಡೆದು ಹಾಕಲು ಆಗುತ್ತಿಲ್ಲ. ಈ ಬಗ್ಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅವರು ನನ್ನ ಬಳಿ ಚರ್ಚಿಸಿದ್ದಾರೆ. ರಾಜ್ಯದ ಹಿರಿಯ ಅಧಿಕಾರಿಗಳು ಆರ್ ಎಸ್ಎಸ್ಗೆ ಸೇರಿದ್ದರಿಂದ ಕಾಂಗ್ರೆಸ್ ಮುಖಂಡರ ಮಾತನ್ನು ಕೇಳುವುದಿಲ್ಲವೆಂದು ನನಗೆ ಹೇಳಿದ್ದರು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.