– ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟ ಪ್ರಕರಣ
– ಎನ್ಐಎ ಕೋರ್ಟ್ನಲ್ಲಿ ಆರೋಪಿಗಳಿಂದ ತಪ್ಪೊಪ್ಪಿಗೆ
ಬೆಂಗಳೂರು: 2010ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳು ನ್ಯಾಯಾಲಯದ ಮುಂದೆ ತಪ್ಪೊಪಿಕೊಂಡಿದ್ದಾರೆ.
ಆರೋಪಿಗಳಾದ ಅಹಮ್ಮದ್ ಜಮಾಲ್, ಹಾಗು ಆಫ್ತಾಬ್ ಆಲಮ್ ಅಲಿಯಾಸ್ ಫಾರೂಕ್ ತಪ್ಪೊಪ್ಪಿಕೊಂಡಿದ್ದಾರೆ. ಈ ಇಬ್ಬರು ಎನ್ಐಎ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಜೊತೆಗೆ ನಾವು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯವರು ಎಂದು ಹೇಳಿದ್ದಾರೆ.
ನಾವು ದೆಹಲಿಯ ಜಾಮೀಯಾ ನಗರದ ಮನೆಯೊಂದರಲ್ಲಿ ಬಾಂಬ್ ಸ್ಫೋಟದ ಒಳ ಸಂಚು ರೂಪಿಸಿದ್ದೆವು. ಈ ಮನೆಯಲ್ಲಿರುವಾಗಲೇ ನಮಗೆ ಲಷ್ಕರ್ ಇ-ತೋಯ್ಬಾ ಸಂಘಟನೆಯಿಂದ ಆರ್ಥಿಕ ಸಹಾಯ ದೊರಕಿತ್ತು. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವ ಸ್ಥಳವನ್ನು ಪ್ರಕರಣದ ಪ್ರಮುಖ ಆರೋಪಿಯಾದ ಮಹಮದ್ ಯಾಸಿನ್ ನಿರ್ದೇಶನದಂತೆ ಗುರುತಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ಹಾಗೂ ತುಮಕೂರಿನಲ್ಲಿ ಸ್ಫೋಟದ ಸಂಚು ರೂಪಿಸಲಾಗಿತ್ತು. ಹೀಗಾಗಿ ಬಾಂಬ್ ಸ್ಫೋಟಕವನ್ನು ತುಮಕೂರಿನಿಂದ ಬೆಂಗಳೂರಿಗೆ ತಂದಿದ್ದೇವು. ಯಾಸಿನ್ ಮತ್ತು ಇತರ ನಾಲ್ವರು ಸೇರಿಕೊಂಡು ಸ್ಟೇಡಿಯಂ ಬಳಿ 5 ಸ್ಫೋಟಕಗಳನ್ನು ಅಳವಡಿಸಿದ್ದೇವು ಎಂದು ಆರೋಪಿಗಳು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂಬರ್ 12ರಲ್ಲಿದ್ದ ಬಾಂಬ್ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಉಳಿದ ನಾಲ್ಕು ಬಾಂಬ್ಗಳನ್ನು ಪೊಲೀಸರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದರು.
ಈ ಮಧ್ಯೆ ಆರೋಪಿಗಳ ತಪ್ಪೊಪ್ಪಿಗೆಯನ್ನು ತಿರಸ್ಕರಿಸುವಂತೆ ಸರ್ಕಾರಿ ಪರ ವಕೀಲರಿಂದ ನ್ಯಾಯಲಯಕ್ಕೆ ಮನವಿ ಮಾಡಿದ್ದಾರೆ. ಆರೋಪಿಗಳು ದೇಶದ ವಿರುದ್ಧ ಯುದ್ಧ ಸಾರಿದವರು, ಹೀಗಾಗಿ ಇವರಿಗೆ ಶಿಕ್ಷೆ ಆಗಬೇಕು. ಈ ಹಿನ್ನಲೆ ನ್ಯಾಯಾಲಯ ಆರೋಪಿಗಳ ತಪ್ಪೊಪ್ಪಿಗೆ ಅರ್ಜಿ ವಜಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳ ಹೇಳಿಕೆಯ ಆಧಾರದಲ್ಲಿ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.