ಉಡುಪಿ: ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಉಡುಪಿ ಜಿಲ್ಲೆಯ ಸುವರ್ಣ ನದಿ ಉಕ್ಕಿ ಹರಿಯುತ್ತಿದ್ದು, ತಟದ 35 ನಿವಾಸಿಗಳನ್ನು ಶಿಫ್ಟ್ ಮಾಡಲಾಗಿದೆ.
ಸ್ವರ್ಣಾ ನದಿ ಬದಿಯಲ್ಲಿ ಬರುವ ಬಲ್ಲೆಕುದ್ರು, ಪಾಸ್ಕುದ್ರು, ಕೊಡಿಪಟ್ಲ, ಮೆಲ್ ಕೊಡಿಪಟ್ಲದಲ್ಲಿ ನಡುಗಡ್ಡೆಯ ವಾತಾವರಣ ಸೃಷ್ಟಿಯಾಗಿದೆ. ಕೆಲ ಮನೆಗಳಿಗೆ ನೀರು ನುಗ್ಗಿದೆ. ಸುವರ್ಣ ತಟದಲ್ಲಿ ಸ್ಥಳಗಳಲ್ಲಿ ಸಿಲುಕಿದ್ದ 15 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಯಿತು. ಆತಂಕದಲ್ಲಿದ್ದ ಮೂವತ್ತಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೊಟ್ ಮುಖಾಂತರ ರಕ್ಷಿಸಿ ದಡಕ್ಕೆ ತರಲಾಗಿದೆ.
ಉಡುಪಿಯ ತಹಶೀಲ್ದಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಬಲೇಕುದ್ರು ಎಂಬಲ್ಲಿ ಒಂದೇ ಕುಟುಂಬದ ಎಂಟು ಮಂದಿಯನ್ನು ರಕ್ಷಣೆ ಮಾಡಲಾಯಿತು. 80 ವರ್ಷದ ಅಜ್ಜಿ 8 ತಿಂಗಳ ಹಸುಗೂಸು ಸೇರಿದಂತೆ ಎತ್ತರ ಪ್ರದೇಶಕ್ಕೆ ಕುಟುಂಬವನ್ನು ಅಗ್ನಿಶಾಮಕ ಇಲಾಖಾ ಸಿಬ್ಬಂದಿ ಮೂಲಕ ಶಿಫ್ಟ್ ಮಾಡಲಾಗಿದೆ.
ಚಿಕ್ಕಮಗಳೂರು ಶಿವಮೊಗ್ಗದ ಗಡಿಭಾಗದಲ್ಲಿ, ಪಶ್ಚಿಮಘಟ್ಟದ ತಪ್ಪಲಿನಲ್ಲಿ ಭಾರೀ ಮಳೆ ಬಿದ್ದಿದ್ದರಿಂದ ನೀರಿನ ಮಟ್ಟ ಉಡುಪಿ ಜಿಲ್ಲೆಯ ನದಿಗಳಲ್ಲಿ ಏರಿಕೆಯಾಗಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ.