ಬೆಂಗಳೂರು: ಸರಳವಾದ ವ್ಯಕ್ತಿತ್ವವನ್ನು ಹೊಂದಿದ್ದರು. ಅವರಂತಹ ಸ್ನೇಹಿತರನ್ನೂ ನಾನು ನೋಡಿಯೇ ಇಲ್ಲ, ಈ ವಿಚಾರವನ್ನು ನಮಗೆ ನಂಬೋಕೆ ಆಗುತ್ತಿಲ್ಲ ಎಂದು ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಮತ್ತು ನಟಿ ಮಾನ್ವಿತಾ ಕಾಮತ್ ಕಣ್ಣೀರು ಹಾಕಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾನ್ವಿತಾ, ಚಿರಂಜೀವಿ ಸರ್ಜಾ ಅವರ ಅಗಲಿಕೆಯನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಈ ಸುದ್ದಿಯಿಂದ ನನಗೆ ಶಾಕ್ ಆಗಿದೆ. ಎಲ್ಲರೊಂದಿಗೆ ಬೆರೆಯುತ್ತಿದ್ದ ನಟ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ. ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾನ್ವಿತಾ ಕಾಮತ್ ಕಣ್ಣೀರು ಹಾಕಿದರು.
ಇನ್ನೂ ಶಿವರಾಜ್ ಪೇಟೆ ಅವರು ಮಾತು ಶುರು ಮಾಡಿದಾಗಲೇ ಗಳಗಳನೇ ಅತ್ತಿದ್ದಾರೆ. ಈಗ ತಾನೇ ಬೆಳೆಯುತ್ತಿರುವ ಕಲಾವಿದರಿಗೂ ಸಹಾಯ ಮಾಡುತ್ತಿದ್ದರು. ಚಿತ್ರೀಕರಣ ವೇಳೆ ಅಜ್ಜಿ ಮನೆಯಿಂದ ಊಟ ಕಳುಹಿಸಿದ್ದಾರೆ ಬಾ ಒಟ್ಟಿಗೆ ಊಟ ಮಾಡೋಣ ಎಂದು ಕರೆದಿದ್ದರು. ತುಂಬಾ ಹೃದಯವಂತಿಕೆಯ ವ್ಯಕ್ತಿತ್ವ ಹೊಂದಿದ್ದರು. ಈಗ ಅವರ ಸಾವಿನ ಸುದ್ದಿಯನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಂಬನಿ ಮಿಡಿದರು.