ಯಾದಗಿರಿ: ಜ್ಯೂಸ್ ಅಂತ ಕ್ರಿಮಿನಾಶಕ ಸೇವಿಸಿ ಪ್ರಾಣಬಿಟ್ಟ ಮಕ್ಕಳ ಕೇಸ್ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಬಲವಂತವಾಗಿ ವಿಷ ಕುಡಿಸಿ ತನ್ನ ಎರಡು ಮಕ್ಕಳನ್ನು ಹೆತ್ತ ತಾಯಿಯೇ ಕೊಂದಿರುವ ಸತ್ಯ ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ.
ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಕೊಡಾಲ್ ಗ್ರಾಮದಲ್ಲಿ ಬರೋಬ್ಬರಿ 10 ತಿಂಗಳ ಹಿಂದೆ ನಡೆದಿದ್ದ ಘಟನೆಗೆ ರೋಚಕ ತಿರುವು ಸಿಕ್ಕಿದೆ. ಕಂದಮ್ಮಗಳನ್ನು ಕೊಂದ 26 ವರ್ಷದ ಶಹನಾಜ್ ಈಗ ಜೈಲುಪಾಲಾಗಿದ್ದಾಳೆ.
ಕೊಡಾಲ್ ಗ್ರಾಮದ ಶಹನಾಜ್ಗೆ ಒಟ್ಟು ನಾಲ್ವರು ಮಕ್ಕಳು ಜೊತೆಗೆ ಕಿತ್ತು ತಿನ್ನುವ ಬಡತನ, ನಾಲ್ವರಲ್ಲಿ ಮೂವರು ಹೆಣ್ಣುಮಕ್ಕಳು, ಮಕ್ಕಳನ್ನು ಸಾಕಲಾಗದೇ ಶಹನಾಜ್ ರೋಸಿ ಹೋಗಿದ್ದಳು. ಇದೇ ಕಾರಣಕ್ಕೆ ನಾಲ್ವರು ಮಕ್ಕಳಲ್ಲಿ 2 ವರ್ಷದ ಖೈರುನ್, 4 ತಿಂಗಳ ಅಪ್ಸಾನಾ ಎಂಬ ಇಬ್ಬರು ಹೆಣ್ಣು ಮಕ್ಕಳಿಗೆ ಕ್ರಿಮಿನಾಶಕ ಕುಡಿಸಿ ಸಾಯಿಸಿದ್ದಾಳೆ.
ಮಕ್ಕಳನ್ನು ಕೊಂದ ಬಳಿಕ ಅನುಮಾನ ಬಾರದಂತೆ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೀತಿ ನಾಟಕವಾಡಿದ್ದಳು. ಅನುಮಾನ ಬಂದ ಪೊಲೀಸರು ಮಣ್ಣು ಮಾಡಿದ್ದ ಶವಗಳನ್ನ ಹೊರತೆಗೆಸಿ ಶವಪರೀಕ್ಷೆ ಮಾಡಿಸಿ ಬಳಿಕ ಅಂತ್ಯಸಂಸ್ಕಾರ ಮಾಡಿಸಿದ್ದರು. 10 ತಿಂಗಳ ಬಳಿಕ ಎಫ್ಎಸ್ಎಲ್ ವರದಿಯಲ್ಲಿ ಸತ್ಯ ಬಹಿರಂಗವಾಗಿದೆ.