ಬೆಂಗಳೂರು: ತಾಯಿಯನ್ನ ಸಾಕದೇ ಪಾಪಿ ಮಗ, ಮಗಳು ತಾಯಿಯನ್ನ ನಗರದ ವೈಟ್ ಫೀಲ್ಡ್ ನ ಸ್ಮಶಾನದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ.
ಅಡುಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸ್ಮಶಾನದಲ್ಲಿ ಕಳೆದ 15 ದಿನಗಳಿಂದ ವೃದ್ಧೆಯೊಬ್ಬರು ಊಟವಿಲ್ಲದೇ, ಮಳೆಯಲ್ಲಿ ನರಕ ಅನುಭವಿಸುತ್ತಿದ್ದರು. ಸ್ಥಳೀಯರೇ ಅಜ್ಜಿಯ ರಕ್ಷಣೆಗೆ ಮುಂದಾಗಿ ಟಾರ್ಪಲ್ ವ್ಯವಸ್ಥೆ ಮಾಡಿ, ಯೋಗಿಶ್ ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್ ಗೆ ಮಾಹಿತಿಯನ್ನು ನೀಡಿದ್ದರು. ಕೂಡಲೇ ರಾತ್ರಿ ಅಜ್ಜಿಯನ್ನ ರಕ್ಷಿಸಿ, ಜನಸ್ನೇಹಿ ಆಶ್ರಮದ ಸಂಸ್ಥಾಪಕ ಯೋಗಿಶ್, ಸದ್ಯ ವೃದ್ಧೆಗೆ ಆಶ್ರಯ ನೀಡಿದ್ದಾರೆ.
ಬದುಕಿತು ಹಿರಿಜೀವ:
ಮಧ್ಯರಾತ್ರಿಯ ಮಳೆಯಲ್ಲೂ ಅಜ್ಜಿಗೆ ಊಟ, ಜ್ಯೂಸ್ ನೀಡಿ ಸಾವಿನ ದವಡೆಯಿಂದ ಅಜ್ಜಿಯನ್ನ ಪಾರು ಮಾಡಿದ್ದಾರೆ. 15 ದಿನಗಳಿಂದ ಊಟವಿಲ್ಲದೇ ನಿತ್ರಣಗೊಂಡಿದ್ದ ಅಜ್ಜಿಗೆ ಚಿಕಿತ್ಸೆ ನೀಡಿ ತಮ್ಮ ಆಶ್ರಮದಲ್ಲಿರಿಸಿಕೊಂಡಿದ್ದಾರೆ. ಸಾಕು-ಸಲುಹಿದ ಮಕ್ಕಳು ಬೀದಿಯಲ್ಲಿ ಬಿಟ್ಟು ಹೋಗಿದ್ದಾರೆ. ಇಂತಹ ಮಕ್ಕಳು ಬೇಡ. ಒಂದು ತಿಂಗಳಿನಿಂದ ಊಟ ಮಾಡಿಲ್ಲ. ತುಂಬಾ ಚಳಿಯಾಗ್ತಿದೆ ಅಂತ ಅಜ್ಜಿ ಸಂಕಟವನ್ನ ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯರಾದ ವಿಜಯ್ ಎಂಬವರು ಅನಾಥಗೊಂಡಿದ್ದ ಅಜ್ಜಿಗೆ ಕೊರೊನಾ ಟೆಸ್ಟ್ ಮಾಡಿಸಿ, ಅನಾಥಾಶ್ರಮಕ್ಕೆ ಮಾಹಿತಿ ನೀಡಿದ್ದರು. ವಿಜಯ್ ಕುಮಾರ್ ನೀಡಿದ ಮಾಹಿತಿಯ ಮೇರೆಗೆ ಜನಸ್ನೇಹಿ ಯೋಗೀಶ್ ಅಜ್ಜಿಯ ರಕ್ಷಣೆ ಮಾಡಿದ್ರು.
ಬೀದಿಗೆ ತಳ್ಳಿದ ಮಗಳು:
ಸ್ಮಶಾನದಲ್ಲಿ ಅನಾಥವಾಗಿದ್ದ ಅಜ್ಜಿಗೆ ಒಬ್ಬ ಮಗ ಹಾಗೂ ಸಾಕು ಮಗಳಿದ್ದಾರೆ. ಬೀದಿಯಲ್ಲಿ ಅನಾಥವಾಗಿ ಬಿದ್ದದ್ದ ಮಗುವನ್ನ ಸಾಕಿ, ಸಲುಹಿದ ತಾಯಿಯನ್ನೇ ಮಗಳು ಬೀದಿಗೆ ಬಿಟ್ಟು ಹೋಗಿದ್ದಾಳೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ