ಲಕ್ನೋ: ತಾಜ್ಮಹಲ್ ನಲ್ಲಿ ಶಿವರಾತ್ರಿ ಆಚರಣೆಗೆ ತೆರಳಿದ್ದ ಹಿಂದೂ ಸಂಘಟನೆಯ ಕೆಲ ಯುವಕರನ್ನ ಸಿಐಎಸ್ಎಫ್ ವಶಕ್ಕೆ ಪಡೆದುಕೊಂಡಿದೆ.
ಮಹಾಶಿವರಾತ್ರಿ ಹಿನ್ನೆಲೆ ತಾಜ್ಮಹಲ್ ಪ್ರಮುಖ ಗುಂಬಜ್ ಬಳಿ ಪೂಜೆ ಸಲ್ಲಿಸಲು ಹಿಂದೂ ಮಹಾಸಭಾ ಸ್ಥಳೀಯ ಅಧ್ಯಕ್ಷ ಮೀನಾ ದಿವಾಕರ್ ನೇತೃತ್ವದಲ್ಲಿ ತೆರಳಿದ್ದರು. ಪೂಜೆಗೆ ಮುಂದಾಗಿದ್ದ ಸಂಘಟನೆಯನ್ನ ವಶಕ್ಕೆ ಪಡೆದಿರುವ ಸಿಐಎಸ್ಎಫ್ ವಿಚಾರಣೆಗೆ ಒಳಪಡಿಸಿದೆ.
ಇಂದು ದೇಶಾದ್ಯಂತ ಶಿವರಾತ್ರಿ ಆಚರಿಸಲಾಗುತ್ತಿದೆ. ಮಹಾಶಿವರಾತ್ರಿಯನ್ನ ಜನ ಸಡಗರ ಹಾಗೂ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಬೆಳಗಿನ ಜಾವದಿಂದಲೇ ಶಿವದರ್ಶನಕ್ಕೆ ಭಕ್ತರು ದೇವಾಲಯಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ಮೊಘಲರ ದೊರೆ ಶಾಜಹಾನ್ ಅವರು 17ನೇ ಶತಮಾನದಲ್ಲಿ ಆಗ್ರಾದ ಬಳಿ ತನ್ನ ಪತ್ನಿ ಮುಮ್ತಾಜ್ ಗಾಗಿ ಕಟ್ಟಿಸಿದ ಸಮಾಧಿಯೇ ತಾಜ್ ಮಹಲ್. ಈ ಆವರಣದಲ್ಲಿ ಒಂದು ಮಸೀದಿಯೂ ಇದೆ. ಆದರೆ, ಕೆಲ ಇತಿಹಾಸಕಾರರ ಪ್ರಕಾರ ತಾಜ್ ಮಹಲ್ ಹಿಂದೆ ಶಿವನ ದೇವಾಲಯವಾಗಿತ್ತು ಎನ್ನಲಾಗಿದೆ. ಹಿಂದೂ ದೇಗುಲವನ್ನು ಒಡೆದು ಅಲ್ಲಿ ತಾಜ್ ಮಹಲ್ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಈಗಲೂ ಶಿವಲಿಂಗವಿದೆ ಎಂಬ ವಾದವಿದೆ.