ಬೆಂಗಳೂರು: ನಗರದ ಹೊರವಲಯದ ನೆಲಮಂಗಲ ತಾಲೂಕಿನ ತಹಶೀಲ್ದಾರ್ ಕಚೇರಿಯ ಜೀಪ್ ಚಾಲಕನಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ರ್ಯಾಂಡಮ್ ಟೆಸ್ಟ್ ವೇಳೆ ಪಾಸಿಟಿವ್ ವರದಿ ಬಂದಿದೆ.
ಈ ಕುರಿತು ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತ್ಯಾಮಗೊಂಡ್ಲು ಹೋಬಳಿಯ ಕೊಡಗೀಬೊಮ್ಮನಹಳ್ಳಿಯಲ್ಲಿ ಮಾತಾನಾಡಿ, ತಹಶೀಲ್ದಾರ್ ಜೀಪ್ ಓಡಿಸುತ್ತಿದ್ದ ಚಾಲಕನಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಇರಲಿಲ್ಲ. ಅಧಿಕಾರಿಗಳ ರ್ಯಾಂಡಮ್ ಟೆಸ್ಟ್ ಮಾಡಿಸುತ್ತಿದ್ದ ವೇಳೆ ಚಾಲಕನಿಗೂ ಮಾಡಲಾಗಿತ್ತು. ಆಗ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಜೀಪ್ ಚಾಲಕನಿಗೆ ಯಾವ ರೀತಿ ಕೊರೊನಾ ಬಂತು ತಿಳಿದಿಲ್ಲ, ಕೊರೊನಾ ಸೋಂಕಿತರು ಮನೆಯಲ್ಲೇ ಕ್ವಾರಂಟೈನ್ ಆಗಬೇಕು, ಸ್ವಯಂ ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ಚಾಲಕನಿಗೆ ಕೊರೊನಾ ಸೋಂಕು ತಗುಲುವ ಮೂಲಕ ನೆಲಮಂಗಲ ತಾಲೂಕಿನಲ್ಲಿ ಒಟ್ಟು 16 ಪ್ರಕರಣಗಳು ಪತ್ತೆಯಾದಂತಾಗಿವೆ. ಈ ಬಗ್ಗೆ ಸಭೆ ನಡೆಸಿದ್ದು, ತಾಲೂಕು ವೈದ್ಯಾಧಿಕಾರಿಗಳ ತಂಡ ಕಾರೊನಾ ಬಗ್ಗೆ ಎಚ್ಚರ ವಹಿಸಿದೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ಮಾಡಲಾಗಿದೆ ಎಂದರು.