ಮುಂಬೈ: ಮುನಿಸಿಕೊಂಡು ತವರು ಸೇರಿದ್ದ ಪತ್ನಿಯನ್ನು ಕರೆ ತರಲು ಮಕ್ಕಳು ಸತ್ತಂತೆ ಫೋಟೋ ಕ್ಲಿಕ್ಕಿಸಿದ ಪತಿ ಜೈಲು ಸೇರಿದ್ದಾನೆ. ಈ ಘಟನೆ ಮುಂಬೈನ ಕುರಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
33 ವರ್ಷದ ಸುಚಿತ್ ಗೌಡ ಜೈಲು ಸೇರಿದ ವ್ಯಕ್ತಿ. ಎರಡು ವರ್ಷಗಳ ಹಿಂದೆ ಸುಚಿತ್ ಪತ್ನಿ ಮುನಿಸಿಕೊಂಡು ತವರು ಸೇರಿದ್ದಳು. ಪತ್ನಿಯನ್ನ ಕರೆತರಲು ಮಗನನ್ನು ಶವದಂತೆ ಮಲಗಿಸಿದ್ದಾನೆ. ಆತನ ಮೇಲೆ ಹೂವಿನ ಹಾರ ಹಾಕಿ, ಹಣೆಗೆ ದೊಡ್ಡದಾದ ತಿಲಕವಿಟ್ಟು, ಪಕ್ಕದಲ್ಲಿ ಅಗರಬತ್ತಿ ಬೆಳಗಿ ಫೋಟೋ ಕ್ಲಿಕ್ ಮಾಡಿ, ಪತ್ನಿಗೆ ಕಳುಹಿಸಿದ್ದಾನೆ. ಎಂಟು ವರ್ಷದ ಮಗ ತಂದೆ ಹೇಳಿದಂತೆಯೇ ಕೇಳಿದ್ದಾನೆ.
ಇದೆಲ್ಲ ನೋಡಿದ 13 ವರ್ಷದ ಮಗಳು ಭಯಗೊಂಡಿದ್ದಳು. ಆಕೆಯ ಕುತ್ತಿಗೆ ಹಗ್ಗ ಬಿಗಿದು ಫ್ಯಾನ್ ಗೆ ಕಟ್ಟಿದ್ದಾನೆ. ಹಗ್ಗ ಬಿಗಿಯಾಗುತ್ತಿದ್ದಂತೆ ಭಯಗೊಂಡ ಮಗಳು ಜೋರಾಗಿ ಕಿರುಚಿದ ಕೂಡಲೇ ಸುಚಿತ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮಗು ಧ್ವನಿ ಕೇಳಿ ಬಂದ ನೆರೆ ಮನೆಯವರು ಆಕೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುಚಿತ್ ಗೌಡ ಮದ್ಯದ ನಶೆಯಲ್ಲಿ ಈ ರೀತಿ ಮಾಡಿದ್ದಾನೆ. ವಾರದ ಹಿಂದೆ ಊರಿಗೆ ಹೋಗಿದ್ದ ಸುಚಿತ್, ಜೊತೆಯಲ್ಲಿ ಮಗ ಮತ್ತು ಮಗಳನ್ನು ಮುಂಬೈಗೆ ಕರೆದುಕೊಂಡು ಬಂದಿದ್ದನು. ಆರೋಪಿ ನಶೆಯಲ್ಲಿ ಮಕ್ಕಳ ಮೇಲೆ ಹಲ್ಲೆ ಸಹ ನಡೆಸುತ್ತಿರುವ ವಿಚಾರ ನೆರೆಹೊರೆಯವರಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದರು. ಇದನ್ನೂ ಓದಿ: ಕಾಜಲ್, ಸಮಂತಾ, ವಿಜಯ್ ದೇವರಕೊಂಡ ಹಿಂದಿಕ್ಕಿದ ರಶ್ಮಿಕಾ
ಆರೋಪಿ ವಿರುದ್ಧ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಹಾಗೂ ಕೊಲೆ ಯತ್ನದಡಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಯನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಸದ್ಯ ಮಕ್ಕಳನ್ನು ತಾಯಿಯ ವಶಕ್ಕೆ ನೀಡಲಾಗಿದೆ. ಇದನ್ನೂ ಓದಿ: ನಾನೇನು ಕಿಂಗ್ ಮೇಕರ್ ಅಲ್ಲ, ಗೇಮ್ ಬ್ರೇಕರ್ ಅಂತೂ ಅಲ್ಲ: ಅಸಾದುದ್ದೀನ್ ಓವೈಸಿ