ಹೈದರಾಬಾದ್: ತರಗತಿಯಲ್ಲಿ ಕುಳಿತು ಕುಡಿಯುತ್ತಾ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ಧಗಳಿಂದ ಬೈಯ್ಯುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಕೆ. ಕೋಟೇಶ್ವರ ರಾವ್ ಅಮಾನತು ಆಗಿರುವ ಶಿಕ್ಷಕ. ಈತ ಕೃಷ್ಣ ಜಿಲ್ಲೆಯ ಪಲಕ ಮಂಡಲ್ ಪ್ರದೇಶದವನಾಗಿದ್ದಾನೆ. ಶಾಲೆಯಲ್ಲಿ ಮದ್ಯ ಸೇವನೆಯನ್ನು ಮಾಡಿ ಅಮಾನತು ಆಗಿ ಕೆಲಸವನ್ನು ಕಳೆದುಕೊಂಡಿದ್ದಾನೆ.
ಕೋಟೇಶ್ವರ ರಾವ್ ಶಿಕ್ಷಕರ ಕೊಠಡಿಯಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡಿದ್ದನಂತೆ. ಈ ಕುರಿತಾಗಿ ಕೇಳಿದರೆ ಮಕ್ಕಳಿಗೆ ಮಕ್ಕಳ ಪಾಲಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದನಂತೆ. ಈ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ಬಟ್ಟೆ ಬಿಚ್ಚು ಎಂದು ರಾವ್ ಹೇಳಿದ್ದನಂತೆ. ಈ ಶಿಕ್ಷಕ ಶಾಲೆಯಲ್ಲಿದ್ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ನಿರ್ಧರಿಸಿದ ಪೋಷಕರು ರಾವ್ ಶಾಲೆಯಲ್ಲಿ ಕುಳಿತು ಕುಡಿಯುತ್ತಾ ಇರುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಕೋಟೇಶ್ವರ ರಾವ್ ಶಾಲೆಯಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ವೀಡಿಯೋವನ್ನು ಪೋಷಕರು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಶಿಕ್ಷಣ ಇಲಾಖೆಗೆ ಈ ಕುರಿತಾಗಿ ದೂರು ನೀಡಲಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಶಿಕ್ಷಕನ ಅಮಾನತು ಮಾಡಿದ್ದಾರೆ.