ಮಡಿಕೇರಿ: ತರಕಾರಿ ಗೂಡ್ಸ್ ವಾಹನ ದಲ್ಲಿ ಹುಣಸೂರುವಿನಿಂದ ಕೇರಳಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲೂಕಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ದಿನನಿತ್ಯ ಮೈಸೂರು ಭಾಗದ ಹುಣಸೂರಿನಿಂದ ಕೇರಳಕ್ಕೆ ತರಕಾರಿ ಸಾಗಾಟ ಮಾಡುತ್ತಿದ್ದ ವಾಹನದಲ್ಲಿ ಮದ್ಯ ಸಾಗಾಟವಾಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ಪೋನ್ನಂಪೇಟೆ ಪೊಲೀಸರ ತಂಡ ಇಂದು ಆನೆಚೌಕೂರು ಗೇಟ್ ನಲ್ಲಿ ತಪಾಸಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ತರಕಾರಿ ಗೂಡ್ಸ್ ವಾಹನದಲ್ಲಿ ಮದ್ಯದ ಬಾಟಲ್ ಪತ್ತೆಯಾಗಿದೆ.
ಗೂಡ್ಸ್ ವಾಹನದಲ್ಲಿದ್ದ ಸುಮಾರು 1.20 ಲಕ್ಷ ರೂ. ಮೌಲ್ಯದ ವಿವಿಧ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭ ಗೂಡ್ಸ್ ವಾಹನದ ಚಾಲಕ ಅನುಪ್ ಹಾಗೂ ನಿರ್ವಾಹಕ ಉದಯ್ ಕುಮಾರ್ ಎಂಬುವವರನ್ನು ಪೊಲೀಸರು ವಶಪಡಿಸಿಕೊಂಡು ಗೂಡ್ಸ್ ವಾಹನವನ್ನು ಸೀಜ್ ಮಾಡಿದ್ದಾರೆ. ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ನಿರ್ದೇಶನದ ಮೇರೆಗೆ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕರಾದ ಎಸ್.ಎನ್.ಜಯರಾಮ್ ಹಾಗೂ ಪೊಲೀಸ್ ಉಪ ನಿರೀಕ್ಷಕ ಹೆಚ್.ಸುಬ್ಬಯ್ಯ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಭಾಗಿಯಾಗಿದ್ದರು.