ಮುಂಬೈ: ಚಲನಚಿತ್ರ ನಟ, ನಿರ್ಮಾಪಕ, ನೃತ್ಯ ಸಂಯೋಜಕ ಪ್ರಭುದೇವ ಈ ವರ್ಷದ ಆರಂಭದಲ್ಲಿಯೇ ಸಪ್ತಪದಿ ತುಳಿದಿದ್ದಾರೆ. ಮುಂಬೈ ಮೂಲದ ವೈದ್ಯರನ್ನು ವಿವಾಹವಾಗಿದ್ದಾರೆ ಎಂದು ಪ್ರಭುದೇವ ಸಹೋದರ ರಾಜು ಸುಂದರಂ ಸಂದರ್ಶನದಲ್ಲಿ ದೃಢಪಡಿಸಿದ್ದಾರೆ.
ನೃತ್ಯ ಸಂಯೋಜಕ ಪ್ರಭುದೇವ ಲಾಕ್ಡೌನ್ ಸಮಯದಲ್ಲಿ ಮೇ ತಿಂಗಳಲ್ಲಿ ಹಿಮಾನಿ ಎಂಬ ಫಿಸಿಯೋಥೆರಪಿಸ್ಟ್ ವೈದ್ಯೆಯನ್ನ ವಿವಾಹವಾಗಿದ್ದಾರೆ ಎಂಬ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. ಪ್ರಭುದೇವ ಅವರು ಫಿಸಿಯೋಥೆರಪಿಸ್ಟ್ ಒಬ್ಬರನ್ನು ಸೆಪ್ಟೆಂಬರ್ ನಲ್ಲೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿತ್ತು. ಇದಕ್ಕೆ ಇವರ ಸಹೋದರ ತೆರೆ ಎಳೆದಿದ್ದಾರೆ.
ಪ್ರಭುದೇವ ಅವರ ವಿವಾಹದ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ. ಅವರು ಡಾ.ಹಿಮಾನಿ ಅವರ ಬಳಿ ಬೆನ್ನು ಮತ್ತು ಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆ ವೇಳೆ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ಪ್ರಭುದೇವ ಸಹೋದರ ರಾಜು ಸುಂದರಂ ಹೇಳಿದ್ದಾರೆ.
ಮದುವೆಯಾಗುವ ಮೊದಲು ಸುಮಾರು ಎರಡು ತಿಂಗಳ ಕಾಲ ಲಿವಿಂಗ್-ಇನ್ ಸಂಬಂಧದಲ್ಲಿದ್ದರು. ನಂತರ ಲಾಕ್ಡೌನ್ ನಿಯಮಗಳಿಂದಾಗಿ ಪ್ರಭುದೇವ ಅವರ ಮದುವೆ ಚೆನ್ನೈನಲ್ಲಿ ಅವರ ಕುಟುಂಬದವರ ಸಮ್ಮುಖದಲ್ಲಿ ನಡೆಯಿತು. ಡಾ. ಹಿಮಾನಿ ಅವರು ಪ್ರಭುದೇವ ಅವರ ಕುಟುಂಬವನ್ನು ಎರಡು ಬಾರಿ ಮಾತ್ರ ಭೇಟಿಯಾಗಿದ್ದಾರೆ. ಮೊದಲು ಜುಲೈ ಅಥವಾ ಆಗಸ್ಟ್ ನಲ್ಲಿ ಮತ್ತು ಎರಡನೆಯದು ಇತ್ತೀಚೆಗೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮದುವೆ ವಿಚಾರದಲ್ಲಿ ಪ್ರಭುದೇವ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ, ಅವರು 1995ರಲ್ಲಿ ರಾಮಲತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳು ಕೂಡ ಇದ್ದರು. ರಾಮಲತಾ ಅವರಿಗೆ ವಿಚ್ಛೇದನ ನೀಡಿದ ಬಳಿಕ ನಟಿ ನಯನತಾರಾ ಜೊತೆ ಪ್ರಭುದೇವ ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು.
ನಯನತಾರಾ ನಿರ್ದೇಶಕ ವಿಘ್ನೇಶ್ ಜೊತೆ ಡೇಟ್ ಮಾಡುತ್ತಿದ್ದರು. ಆ ನಂತರ 2012ರಲ್ಲಿ ಈ ಜೋಡಿ ಬೇರ್ಪಟ್ಟಿತ್ತು. ಬಳಿಕ ಪ್ರಭುದೇವ ಬಾಲಿವುಡ್ ನಲ್ಲಿ ಹೆಸರು ಮಾಡಬೇಕೆಂದು ಮುಂಬೈಗೆ ಹಾರಿದರು. ನಯನತಾರಾ ಸಿನಿಮಾ ನಟನೆಯಲ್ಲಿ ನಿರತರಾಗಿದ್ದರು. ಈಗ ಪ್ರಭುದೇವ ಫಿಸಿಯೋಥೆರಪಿಸ್ಟ್ ಹಿಮಾನಿ ಅವರನ್ನು ಮದುವೆ ಯಾಗಿದ್ದಾರೆ ಎಂಬ ಸುದ್ದಿ ಮುನ್ನಲೆಗೆ ಬಂದಿದೆ.