ಬೆಳಗಾವಿ/ಚಿಕ್ಕೋಡಿ: ಕಂಟೈನ್ಮೆಂಟ್ ಝೋನ್ನಲ್ಲಿರುವ ಬಡ ಜನರು ಹೊರಗೆ ಬರಲಾಗದೆ ಅವರ ಜೀವನ ತುಂಬಾ ಕಷ್ಟವಾಗಿದೆ. ಇದೀಗ ಇವರ ಸ್ಥಿತಿಯನ್ನ ನೋಡಿ ಪೊಲೀಸ್ ಕಾನ್ಸ್ಟೇಬಲ್ ಸಹಾಯ ಮಾಡುತ್ತಿದ್ದಾರೆ.
ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಬಿ.ಕೆ.ನಾಗನೂರೆ ದಿನನಿತ್ಯ ಬಡವರಿಗೆ ತರಕಾರಿ ಹಂಚುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸಂಕೇಶ್ವರ ಪಟ್ಟಣವನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಸಂಕೇಶ್ವರ ಪಟ್ಟಣದಲ್ಲಿ ಬಡವರು ದಿನಗೂಲಿ ಇಲ್ಲದೇ ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಅವರು ದಿನನಿತ್ಯ ಎಪಿಎಂಸಿ ಯಾರ್ಡ್ನಿಂದ ತರಕಾರಿ ಖರೀದಿಸಿ ಬಡವರಿಗೆ ತರಕಾರಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನ ಹಂಚುತ್ತಿದ್ದಾರೆ.
ಸಂಕೇಶ್ವರ ಪಟ್ಟಣದ ವಿವಿಧ ಬಡಾವಣೆಗಳಿಗೆ ತೆರಳಿ ತಮ್ಮಿಂದ ಆದ ಸಹಾಯವನ್ನ ಪೊಲೀಸ್ ಪೇದೆ ಮಾಡುತ್ತಿದ್ದಾರೆ. ಬಡವರ ಸ್ಥಿತಿ ನೋಡಿ ತಮ್ಮ ವೇತನದ ಹಣದಿಂದ ಸಹಾಯ ಮಾಡುತ್ತಿರುವ ಪೊಲೀಸ್ ಕಾನ್ಸ್ಟೇಬಲ್ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.