ಆನೇಕಲ್: ಕಳೆದ 47 ದಿನಗಳಿಂದ ಲಾಕ್ಡೌನ್ ಸಂಕಷ್ಟಕ್ಕೆ ಸರ್ಕಾರ ಬ್ರೇಕ್ ಕೊಟ್ಟು, ಬೆಂಗಳೂರು ನಗರ ಸೇರಿದಂತೆ 19 ಜಲ್ಲೆಗಳಲ್ಲಿ ಅರ್ಧ ದಿನ ಅನ್ಲಾಕ್ ಘೊಷಣೆ ಮಾಡಿತ್ತು. ಇಂದಿನಿಂದ ರಸ್ತೆಗಿಳಿದ ವಾಹನಗಳಿಂದ ಬೆಂಗಳೂರು ಹೊರವಲಯ ಅತ್ತಿಬೆಲೆ ಗಡಿಭಾಗದ ರಾಷ್ಟ್ರೀಯ ಹೆದ್ದಾರಿ ಮೂಲಕ ತಮಿಳುನಾಡು ಮತ್ತು ಕೇರಳ ದಿಂದ ಸಾವಿರಾರು ವಾಹನದಲ್ಲಿ ಜನ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು, ಅತ್ತಿಬೆಲೆ ಟೋಲ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ. ಲಾಕ್ಡೌನ್ ಸಮಯದಲ್ಲಿ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರಿಗೆ ತೆರಳಿದ್ದ ಬಹುತೇಕ ಜನರು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಅದರಲ್ಲೂ ತಮಿಳುನಾಡು ಮತ್ತು ಕೇರಳದಿಂದ ಸಾವಿರಾರು ಜನ ತಮ್ಮ ಸರಕು ಸಾಮಾನುಗಳೊಂದಿಗೆ ಹಿಂದಿರುಗುತ್ತಿದ್ದಾರೆ. ಇದರಿಂದ ಇದೀಗ ಬೆಂಗಳೂರಿಗೆ ಕೊರೊನಾ ಕಂಟಕ ಎದುರಾಗಿದೆ. ಇದನ್ನೂ ಓದಿ: ವಿಶ್ವನಾಥ್ ಆನಂದ್ಗೆ ಟಫ್ ಫೈಟ್ ಕೊಟ್ಟ ಕಿಚ್ಚ- 6.65 ಲಕ್ಷ ದೇಣಿಗೆ ಸಂಗ್ರಹ
ಅತ್ತಿಬೆಲೆಯಲ್ಲಿ ಚೆಕ್ ಪೋಸ್ಟ್ ನಿರ್ಮಾಣಮಾಡಿ ಕರ್ನಾಟಕಕ್ಕೆ ಯಾರೇ ಬಂದರೂ ಅವರನ್ನು ತಪಾಸಣೆ ಮಾಡಿ ಕಳುಹಿಸಿಕೊಡಬೇಕು. ಆದರೆ ಅತ್ತಿಬೆಲೆ ಚೆಕ್ ಪೋಸ್ಟ್ ಗೆ ನಿಯೋಜನೆಯಾಗಿರುವ ಕೆಲವೇ ಕೆಲವು ಪೊಲೀಸ್ ಸಿಬ್ಬಂದಿಯಿಂದ ಸರಿಯಾದ ರೀತಿಯಲ್ಲಿ ತಪಾಸಣೆ ಕೂಡ ಮಾಡಲು ಸಾಧ್ಯ ಆಗುತ್ತಿಲ್ಲ. ರಾಜಾರೋಷವಾಗಿ ಬೆಂಗಳೂರಿಗೆ ಜನ ಬರುತ್ತಿದ್ದು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದು ಕಂಡುಬರುತ್ತಿದೆ. ಇದೇ ರೀತಿ ಜನ ಬಂದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೊರೊನಾ ಮತ್ತೆ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇದೆ.