-ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆತಂಕ ಶುರು
ಚಾಮರಾಜನಗರ: ಡೆಡ್ಲಿ ವೈರಸ್ ಕೊರೊನಾ ಇಡೀ ದೇಶದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಕೆಲವು ರಾಜ್ಯಗಳಿಂದ ಬರುವ ಜನರಿಗೆ ಬ್ರೇಕ್ ಹಾಕಿದೆ. ಅದರಲ್ಲೂ ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಹಾರಾಷ್ಟ್ರ ನಂಟಿನಿಂದ ಏಕೈಕ ಕೊರೊನಾ ಕೇಸ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತ ಎಚ್ಚೆತ್ತು ಹೈ ರಿಸ್ಕ್ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರದಿಂದ ಬರುವ ಜನರಿಗೆ ನಿರ್ಬಂಧ ವಿಧಿಸಿದೆ. ಹೀಗಿದ್ದರೂ ಕೂಡ ಕದ್ದುಮುಚ್ಚಿ ನೆರೆಯ ರಾಜ್ಯದಿಂದ ಜನ ಬಂದು ಹೋಗ್ತಿದ್ದು ಕೊರೊನಾ ಆತಂಕ ಹೆಚ್ಚಾಗುತ್ತಿದೆ. ತಮಿಳುನಾಡಿನಿಂದ ಕಳ್ಳದಾರಿಗಳಲ್ಲಿ ಜನ ರಾಜಾರೋಷವಾಗಿ ಬರುತ್ತಿದ್ದಾರೆ.
ಚಾಮರಾಜನಗರ ಡಿಸಿ ರವಿ ಕೂಡ ತಮಿಳುನಾಡಿನಿಂದ ಬರುವ ಜನರಿಗೆ ನಿರ್ಬಂಧ ವಿಧಿಸಿದ್ದಾರೆ. ಆದರೂ ಕೂಡ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ವನ್ಯ ಜೀವಿ ವ್ಯಾಪ್ತಿಯಲ್ಲಿ ಬರುವ ಪಂಡ್ಯನದೊಡ್ಡಿ ಮೂಲಕ ತಮಿಳುನಾಡಿನ ತಿರುಪೂರು, ಭವಾನಿ,ಕೊಯಮತ್ತೂರು, ಈರೋಡ್ ಜನ ಆಗಮಿಸುತ್ತಿದ್ದಾರೆ.
ವಾರದ ಹಿಂದೆ ಕೂಡ ಮಹದೇಶ್ವರ ಬೆಟ್ಟದ ಕಾಡಿನ ಪಾಲಾರ್, ತಾಳವಾಡಿ ಮೂಲಕ ಕಳ್ಳದಾರಿಗಳಲ್ಲಿ ಜನ ಬರುತ್ತಿದ್ದರು. ಇದಕ್ಕೆ ಮುಳ್ಳಿನ ಬೇಲಿ, ಅರಣ್ಯ ಇಲಾಖೆ, ಪೊಲೀಸರ ಗಸ್ತು ಮೂಲಕ ಬ್ರೇಕ್ ಬಿದ್ದಿತ್ತು. ಇದೀಗ ಪಂಡ್ಯನದೊಡ್ಡಿ ಮೂಲಕ ನಿರಾಂತಕವಾಗಿ ತಮಿಳುನಾಡಿನಿಂದ ಜನ ಬರ್ತಿರೋದು ಆತಂಕಕ್ಕೆ ಕಾರಣವಾಗಿದೆ.