ಚಾಮರಾಜನಗರ: ನಾನು ರಾತ್ರಿ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಅಂತ ಪೋಸ್ಟ್ ಮಾಡಿದ್ದೆ ಎಂದು ನಟ ಧನ್ವೀರ್ ಸ್ಪಷ್ಟನೆ ನೀಡಿದ್ದಾರೆ.
ಕಾನೂನು ಬಾಹಿರವಾಗಿ ರಾತ್ರಿ ಸಫಾರಿ ಮಾಡಿದ ಆರೋಪ ಹೊತ್ತಿರುವ ಧನ್ವೀರ್ ಇಂದು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ವಿಚಾರಣೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿ ನವೀನ್ ಕುಮಾರ್ ಕೇಳಿದ ರಾತ್ರಿ ಸಫಾರಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಧನ್ವೀರ್, ನಾನು ಸಂಜೆ ಹೊತ್ತಿಗೆ ಕಾಡಿನಿಂದ ಹೊರಗಿದ್ದೆ. ಅರಣ್ಯ ಇಲಾಖೆಯ ವಾಹನದಲ್ಲಿ ಸಫಾರಿ ಟಿಕೆಟ್ ಪಡೆದು ತೆರಳಿದ್ದು, ನೈಟ್ ಸಫಾರಿ ಮಾಡಿಲ್ಲ. ತಪ್ಪಾಗಿ ನೈಟ್ ಸಫಾರಿ ಎಂದು ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ.
ನಟ ತೆಗೆದ ಫೋಟೋ, ವಿಡಿಯೋಗಳ ಸಮಯವನ್ನು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ವೈರಲ್ ಆಗಿದ್ದ ವಿಡಿಯೋ, ಸ್ಕ್ರೀನ್ ಶಾಟ್ ಗಳನ್ನು ಅರಣ್ಯ ಇಲಾಖೆಗೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ವಿಚಾರಣೆಯ ವರದಿಯನ್ನು ಸಲ್ಲಿಸಿದ ಬಳಿಕ ಅರಣ್ಯ ಇಲಾಖೆ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಬಂಡೀಪುರದಲ್ಲಿ ನಟ ಧನ್ವೀರ್ ರಾತ್ರಿ ಸಫಾರಿ
ಶುಕ್ರವಾರ ನಟ ಧನ್ವೀರ್ ನೈಟ್ ಸಫಾರಿ ಮಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬಂಡೀಪುರ ಸಿಎಫ್ಒ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ವಿಚಾರಣೆಯ ನಂತರ ಧನ್ವೀರ್ ಬಂಡೀಪುರದಲ್ಲಿ ನೈಟ್ ಸಫಾರಿ ಮಾಡಿಲ್ಲ ಅಂತ ಹೇಳಿದ್ದಾರೆ ಎಂದು ಆರ್ ಎಫ್ಒ ನವೀನ್ ಕುಮಾರ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಲ್ಲ ಅಂತ ತಿಳಿಸಿದ್ದಾರೆ.