– ಕಲಬುರಗಿಯಿಂದ ಕರೆದೊಯ್ಯಲು ಶ್ರಮಿಕ್ ರೈಲು ಸಿದ್ಧ
ರಾಯಚೂರು: ಲಾಕ್ಡೌನ್ ಹಿನ್ನೆಲೆ ರಾಯಚೂರಿನಲ್ಲಿಯೇ ಉಳಿದಿದ್ದ ಬಿಹಾರ ಮೂಲದ ಕಾರ್ಮಿಕರನ್ನ ಅವರ ಊರುಗಳಿಗೆ ಕಳುಹಿಸಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ.
ಕೇಂದ್ರ ಸರ್ಕಾರ ಶ್ರಮಿಕ್ ರೈಲು ವ್ಯವಸ್ಥೆ ಮಾಡಿರುವ ಹಿನ್ನೆಲೆ ರಾಯಚೂರಿನಿಂದ ಕಲಬುರಗಿಗೆ ಬಸ್ ಮೂಲಕ ಕಾರ್ಮಿಕರು ಹೊರಡಲಿದ್ದಾರೆ. ಕಲಬುರಗಿಯಿಂದ ಬಿಹಾರಕ್ಕೆ ರೈಲಿನ ವ್ಯವಸ್ಥೆಯಾಗಿದ್ದು, ಇನ್ನೂ ಸಮಯ ನಿಗದಿಯಾಗಿಲ್ಲ. ಹೀಗಾಗಿ ಅದಕ್ಕೂ ಮುನ್ನ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿ, ಕಲಬುರಗಿ ತಲುಪಲು ಬಸ್ ವ್ಯವಸ್ಥೆ ಮಾಡಲಾಗಿದೆ.
ಬಸ್ ಹಾಗೂ ರೈಲಿನ ಎಲ್ಲಾ ಖರ್ಚುಗಳನ್ನ ಅವರೇ ಭರಿಸಬೇಕಿದೆ. ರಾಯಚೂರಿನಲ್ಲಿ 273 ಜನ ಬಿಹಾರಿಗಳಿದ್ದು, ಅವರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ರೋಗ ಲಕ್ಷಣಗಳು ಕಂಡುಬಂದಲ್ಲಿ ಅಂತವರನ್ನ ಕ್ವಾರಂಟೈನ್ ಮಾಡಿ ಉಳಿದವರನ್ನ ಬಿಹಾರಕ್ಕೆ ತೆರಳಲು ಅವಕಾಶ ನೀಡಲಾಗುತ್ತಿದೆ.
ವಿವಿಧ ವ್ಯಾಪಾರ ಹಾಗೂ ಕೂಲಿ ಕೆಲಸಕ್ಕಾಗಿ ಬಂದ ಬಿಹಾರಿಗಳು ಲಾಕ್ಡೌನ್ ಹಿನ್ನೆಲೆ ಕರ್ನಾಟಕದಲ್ಲೇ ಉಳಿದಿದ್ದರು. ಬಿಹಾರಕ್ಕೆ ತೆರಳುತ್ತಿರುವವರಲ್ಲಿ ಎಲ್ಲಾ ವಯಸ್ಸಿನವರಿದ್ದು, ಗರ್ಭಿಣಿಯರು ಇದ್ದಾರೆ. ಹೀಗಾಗಿ ಎಲ್ಲರನ್ನೂ ಸುರಕ್ಷಿತವಾಗಿ ಕಳುಹಿಸಲು ಜಿಲ್ಲಾಡಳಿತ ಮುಂದಾಗಿದೆ.