ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆ ಯಾರೇ ನಡೆಸಲಿ, ಸತ್ಯ ಎಂದಿಗೂ ಬದಲಾಗಲ್ಲ ಎಂದು ನಟಿ ರಿಯಾ ಚಕ್ರವರ್ತಿ ಪರ ವಕೀಲರಾದ ಸತೀಶ್ ಮಾನಿಶ್ಚಂದ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾರಾಷ್ಟ್ರ ಮತ್ತು ಬಿಹಾರ ಪೊಲೀಸರು ನಡುವಿನ ಹಗ್ಗ ಜಗ್ಗಾಟದಲ್ಲಿದ್ದ ಪ್ರಕರಣವನ್ನ ಸುಪ್ರೀಂಕೋರ್ಟ್ ಸಿಬಿಐಗೆ ಹಸ್ತಾಂತರಿಸಿದೆ. ಆರಂಭದಿಂದಲೂ ಸಿಬಿಐ ತನಿಖೆಗೆ ವಿರೋಧ ಪಡಿಸಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗವಾಗಿತ್ತು. ಇತ್ತು ಸುಶಾಂತ್ ಪರ ವಕೀಲರು, ಅಭಿಮಾನಿಗಳು ಸತ್ಯದ ಮೊದಲ ಹೆಜ್ಜೆ ಎಂದ ಹ್ಯಾಶ್ ಟ್ಯಾಗ್ ಬಳಸಿ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಮಾನವೀಯತೆಯ ಗೆಲುವು, ನನ್ನ ಧ್ವನಿ ಅಡಗಿಸೋ ಪ್ರಯತ್ನ ನಡೆದಿತ್ತು-ಕಂಗನಾ ರಣಾವತ್ ಮೊದಲ ಪ್ರತಿಕ್ರಿಯೆ
ಸುಪ್ರಿಂಕೋರ್ಟ್ ಆದೇಶದ ಬಳಿಕ ಪ್ರತಿಕ್ರಿಯಿಸಿರುವ ರಿಯಾ ಪರ ವಕೀಲ ಸತೀಶ್ ಮಾನಿಶ್ಚಂದ್, ತನಿಖೆಯಲ್ಲಿ ಮುಂಬೈ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ನೀಡಿದ ಸಹಕಾರವನ್ನು ರಿಯಾ ನೀಡಲಿದ್ದಾರೆ. ತನಿಖೆ ಯಾವುದೇ ಏಜೆನ್ಸಿ ನಡೆಸಲಿ ಸತ್ಯ ಮಾತ್ರ ಬದಲಾಗಲ್ಲ ಎಂಬ ನಂಬಿಕೆಯಲ್ಲಿ ರಿಯಾ ಇದ್ದಾರೆ. ಬದಲಾದ ಸನ್ನಿವೇಶ ಮತ್ತು ಮುಂಬೈ ಪೊಲೀಸರ ತನಿಖೆ ಗಮನಿಸಿದ್ರೆ ನಮಗೂ ನ್ಯಾಯ ಸಿಗುವ ವಿಶ್ವಾಸವಿದೆ. ಈ ಮೊದಲು ರಿಯಾ ಸ್ವತಃ ಪ್ರಕರಣದ ತನಿಖೆಯನ್ನ ಸಿಬಿಐಗೆ ವರ್ಗಾಯಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಮನವಿ ಮಾಡಿಕೊಂಡಿದ್ರು ಎಂದಿದ್ದಾರೆ. ಇದನ್ನೂ ಓದಿ: ದೇವರಿಗೆ ಧನ್ಯವಾದಗಳು, ಸತ್ಯದ ಕಡೆ ಮೊದಲ ಹೆಜ್ಜೆ – ಸುಶಾಂತ್ ಸಿಂಗ್ ಸೋದರಿ
ಆತ್ಮಹತ್ಯೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದ ಪಾಟ್ನಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಪೋಷಕರು ದೂರು ಸಲ್ಲಿಸಿದ್ದರು. ಈ ಪ್ರಕರಣದಿಂದ ತಮ್ಮ ಹೆಸರು ಕೈ ಬಿಡುವಂತೆ ಮತ್ತು ಪ್ರಕರಣದ ಎಲ್ಲ ವಿಚಾರಣೆ ಮುಂಬೈಗೆ ವರ್ಗಾಯಿಸಲು ಕೋರಿ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಸುಶಾಂತ್ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆ- ಅಂಕಿತಾ ಲೋಖಂಡೆ ಪ್ರತಿಕ್ರಿಯೆ