ಕಾರವಾರ: ವೃದ್ಧನೋರ್ವ ತನಗೆ ಕಡಿದ ಹಾವನ್ನೇ ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಬಂದು ದಾಖಲಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಅಂಬಾರಕೊಡ್ಲಿನ ಬಲೀಂದ್ರ ಗೌಡ ಗೋವಿಗೆ ಮೇವು ಹಾಗೂ ಸೊಪ್ಪು ತರಲು ತೆರಳಿದ ವೇಳೆ ಹಾವಿನ ಮರಿಯೊಂದು ಕಚ್ಚಿದೆ. ಇದರಿಂದ ಆತಂಕಗೊಂಡ ಅವರು ತನಗೆ ಕಚ್ಚಿದ ಹಾವು ಯಾವ ವರ್ಗಕ್ಕೆ ಸೇರಿದ್ದು ಎಂದು ತಿಳಿಯದೆ ಗೊಂದಲಗೊಂಡಿದ್ದಾರೆ.
ಅಷ್ಟೇ ಅಲ್ಲದೇ ತನಗೆ ಕಚ್ಚಿದ ಹಾವು ಯಾವುದು ಎಂದು ತಿಳಿಯದೆ ವೈದ್ಯರಿಗೆ ಚಿಕಿತ್ಸೆ ಕೊಡಲು ಕಷ್ಟವಾಗುವುದೆಂದು ಅರಿತ ಅವರು ಹಾವನ್ನು ಕೊಟ್ಟೆಯಲ್ಲಿ ಹಿಡಿದುಕೊಂಡು ಬಂದು ಅಂಕೋಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ದೊರೆತ ಬಳಿಕ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ.
ಅಲ್ಲಿ ವೈದ್ಯರ ಮುಂದೆ ತನಗೆ ಕಚ್ಚಿದ ಹಾವನ್ನು ತೋರಿಸಿ ವೈದ್ಯರನ್ನೇ ತಬ್ಬಿಬ್ಬುಗೊಳಿಸಿದ್ದಾರೆ. ಬಳಿಕ ವೈದ್ಯರು ತಕ್ಷಣ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಿದ್ದು, ವಿಷಕಾರಿ ಹಾವಾಗಿರುವ ಕಾರಣ ಒಂದು ದಿನ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚಿಸಿದ್ದಾರೆ. ವೃದ್ಧನ ಆರೋಗ್ಯ ಸ್ಥಿರವಾಗಿದೆ.