ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗೋವು ಕಳ್ಳರ ಕ್ರೂರ ಕೃತ್ಯ ಮಿತಿಮೀರಿದೆ. ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದು ಒಯ್ಯುತ್ತಿರೋದು ಸಾಮಾನ್ಯ ಆಗಿಬಿಟ್ಟಿದೆ.
ಕಾರ್ಕಳದ ಸಾಲ್ಮರ ಪ್ರದೇಶದಲ್ಲಿ ಗೋಕಳ್ಳರ ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ ಬಯಲಾಗಿದೆ. ಕಳೆದ ರಾತ್ರಿ 2.30 ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗುವ, ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಖದೀಮರು ಟಾರ್ಗೆಟ್ ಮಾಡಿಟ್ಟುಕೊಳ್ಳುತ್ತಾರೆ. ತಡರಾತ್ರಿ ಬಂದು ಅಮಾನವೀಯವಾಗಿ ಹೊತ್ತೊಯ್ದಿದ್ದಾರೆ.
ಹೊಟೇಲೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ನೋಡಿದ್ರೆ ಮನಕಲಕುತ್ತದೆ. ಗೋವಿನ ಕೈಕಾಲು ಕಟ್ಟಿ, ಡಿಕ್ಕಿಯೊಳಗೆ ತುಂಬಿ, ಒದ್ದು ಮಲಗಿಸಿದ್ದಾರೆ. ಮತ್ತೊಂದು ಗೋವನ್ನು ಕರೆತರುವ ಖದೀಮರಿಗಾಗಿ ಮಿಕ್ಕವರು ಕಾದಿದ್ದಾರೆ. ಗೋಹತ್ಯಾ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದರೂ ಎಗ್ಗಿಲ್ಲದೆ ಗೋಕಳ್ಳತನ, ಗೋಹತ್ಯೆ ನಡೆಯುತ್ತಿರೋದು ವಿಪರ್ಯಾಸ.
ಹಿಂದೂ ಜಾಗರಣ ವೇದಿಕೆ ಮುಖಂಡ ಪ್ರವೀಣ್ ಯಕ್ಷಿಮಠ ಮಾತನಾಡಿ, ಅಮಾನವೀಯವಾಗಿ ಗೋವು ಕಳ್ಳತನ ಮಾಡುವ ದುಷ್ಟರಿಗೆ ಯಾವುದೇ ಪೊಲೀಸ್ ಶಿಕ್ಷೆ ನೀಡಬಾರದು. ಗೋವುಗಳನ್ನು ಹಿಂಸಿಸಿದ ರೀತಿಯಲ್ಲೇ ಕೈಕಾಲು ಕಟ್ಟಿ, ಹಿಂಸಿಸಿ ನೂರಾರು ಕಿಲೋಮೀಟರ್ ಕಾರಿನ ಡಿಕ್ಕಿಯಲ್ಲಿ ಹಾಕಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರಬೇಕು. ಮುಂದೆ ಜೀವನದಲ್ಲಿ ಗೋವಿನ ಜೊತೆ ಅವರು ಅಮಾನವೀಯವಾಗಿ ವರ್ತಿಸಬಾರದು ಎಂದರು.