ಜೈಪುರ: ಐವರು ಹೆಣ್ಣು ಮಕ್ಕಳು ತಂದೆಯ ಶವಕ್ಕೆ ಕೊಳ್ಳಿ ಇಡುವ ಮೂಲಕ ರಾಜಸ್ಥಾನದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ರಾಜಸ್ಥಾನದ ದುಂಗರ್ಪುರ್ ಜಿಲ್ಲೆಯ ನವಶ್ಯಾಮ್ ಗ್ರಾಮದ ನಿವಾಸಿ ಕರುಲಾಲ್ ತ್ರಿವೇದಿ ಎಂಬವರು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಶನಿವಾರ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಅವರ ಐವರು ಪುತ್ರಿಯರಾದ ನಿರ್ಮಲಾ, ಚಂದ್ರಕಾಂತ, ನೀತಾ, ಜಯಶ್ರೀ ಮತ್ತು ಸುರೇಖ ತಂದೆಯ ಅಂತಿಮ ವಿಧಿವಿಧಾನವನ್ನು ತಾವೇ ಮಾಡಲು ನಿರ್ಧರಿಸಿದರು. ಇವರ ಈ ನಿರ್ಧಾರಕ್ಕೆ ಅವರ ಸಂಬಂಧಿಗಳು ಸಂತೋಷದಿಂದ ಸಮ್ಮತಿ ಸೂಚಿಸಿದರು.
ಈ ಐವರು ಹೆಣ್ಣು ಮಕ್ಕಳು ತಂದೆಯ ಶವವನ್ನು ತಮ್ಮ ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಕರೆದೊಯ್ದಿದ್ದಾರೆ. ಬಳಿಕ ಹಿಂದೂ ಸಂಪ್ರದಾಯದ ಪ್ರಕಾರ ತಂದೆಯ ದೇಹಕ್ಕೆ ಕೊಳ್ಳಿ ಇಟ್ಟು ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. ಅಲ್ಲದೆ ನಮ್ಮ ಪೋಷಕರ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಎಂದಿಗೂ ಅವರು ಗಂಡು ಮಕ್ಕಳ ಮೇಲೆ ವ್ಯಾಮೋಹ ಹೊಂದಿರಲಿಲ್ಲ ಎಂದು ನೀತಾ ಹೇಳಿದ್ದಾರೆ.