ಬೆಂಗಳೂರು: ಕ್ವಾರಂಟೈನ್ನಲ್ಲಿ ಇದ್ದರು ನಿಯಮ ಉಲ್ಲಂಘನೆ ಮಾಡಿದಕ್ಕೆ ಡ್ರೋನ್ ಪ್ರತಾಪನ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು, ಅಶೋಕ ನಗರ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಕ್ವಾರಂಟೈನ್ನಲ್ಲಿ ಇರಬೇಕು ಎಂದು ಅಧಿಕಾರಿಗಳು ಹೇಳಿದ್ದರು ಪ್ರತಾಪ್ ನಿಯಮ ಉಲ್ಲಂಘನೆ ಮಾಡಿದ್ದ. ಆದ್ದರಿಂದ ಆತನ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಆತನನ್ನು ವಶಕ್ಕೆ ಪಡೆದು ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಇಂದಿಗೆ ಪ್ರತಾಪ್ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದ ಕಾರಣ ತಲಘಟ್ಟಪುರ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಆದರೆ ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇದ್ದ ಪ್ರತಾಪ್ ಇನ್ನೊಂದು ಎಡವಟ್ಟು ಮಾಡಿದ್ದು, ಹೋಟೆಲ್ಗೆ ಲಾಯರ್ ಒಬ್ಬರನ್ನು ಕರೆಸಿ ಮಾತಾಡಿದ್ದ. ಹೀಗಾಗಿ ಆತನ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು, ಅಶೋಕ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ಜುಲೈ 15ರಂದು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿದ್ದ. ತಲಘಟ್ಟಪುರದ ಅಪಾಟ್ರ್ಮೆಂಟ್ವೊಂದರಲ್ಲಿ ಈತ ಕ್ವಾರಂಟೈನ್ ಆಗಿದ್ದ. ಆತನ ಕೈಗೆ ಬಿಬಿಎಂಪಿಯಿಂದ ಕ್ವಾರಂಟೈನ್ ಸ್ಟಿಕರ್ ಕೂಡ ಅಂಟಿಸಲಾಗಿತ್ತು. ಆದರೆ, ಅದಾಗಿ ಎರಡೇ ದಿನಕ್ಕೆ ಈತ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದ. ಹೀಗಾಗಿ ಪಶುವೈದ್ಯ ಹಾಗೂ ವಿಧಿ ವಿಜ್ಞಾನ ತಜ್ಞ ಡಾ.ಎಚ್.ಎಸ್.ಪ್ರಯಾಗ್ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಡ್ರೋನ್ ಪ್ರತಾಪ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ನಂತರ ಪ್ರತಾಪ್ ಮೈಸೂರಿನಲ್ಲಿರುವುದನ್ನು ತಿಳಿದು ವಿಶೇಷ ತಂಡ ಮೈಸೂರಿಗೆ ತೆರಳಿತ್ತು. ಅಲ್ಲಿ ಆತನನ್ನು ವಶಕ್ಕೆ ಪಡೆದು ಜುಲೈ 20ರಂದು ಆತನನ್ನು ಬೆಂಗಳೂರಿಗೆ ಕರೆ ತಂದು ಕೆಂಗೇರಿಯ ಖಾಸಗಿ ಹೋಟೆಲ್ನಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಇಂದಿಗೆ ಕ್ವಾರಂಟೈನ್ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ.
ವಶಕ್ಕೂ ಮುನ್ನ ಮೈಸೂರಿನಲ್ಲಿ ಕ್ವಾರಂಟೈನ್ ಆಗುತ್ತೇನೆ ಎಂದು ಪ್ರತಾಪ್ ಪಟ್ಟು ಹಿಡಿದಿದ್ದ. ಆದರೆ ಬೆಂಗಳೂರಿನಲ್ಲೇ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಿ ಅಧಿಕಾರಿಗಳು ಕರೆತಂದಿದ್ದರು. ಪ್ರತಾಪನ ವಿರುದ್ಧ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪದಲ್ಲಿ ಎಮ್ಡಿಎಮ್ ಎ ಆಕ್ಟ್ ಆಡಿ ಕೇಸ್ ದಾಖಲಾಗಿತ್ತು.