ವಿಜಯಪುರ: ಡ್ರೈನೇಜ್ ರಿಪೇರಿ ವೇಳೆ ಮಣ್ಣು ಕುಸಿದು ಬಿದ್ದ ಕಾರಣ ಡ್ರೈನೇಜ್ ಒಳಗೆ ಪೌರ ಕಾರ್ಮಿಕ ಸಿಲುಕಿದ ಘಟನೆ ವಿಜಯಪುರದ ಇಂಡಿ ಪಟ್ಟಣದ 17ನೇ ವಾರ್ಡ್ ನಲ್ಲಿ ನಡೆದಿದೆ.
ಡ್ರೈನೇಜ್ ಗುಂಡಿ ತೊಡುವ ಕೆಲಸ ಮಾಡುವ ವೇಳೆ ಮಣ್ಣು ಕುಸಿದು ಮೈಮೇಲೆ ಬಿದ್ದ ಕಾರಣ ಪೌರ ಕಾರ್ಮಿಕ ಅಶೋಕ್ ಕಡಿಮನಿ (42) ಅಸ್ವಸ್ಥಗೊಂಡು ಪರದಾಡಿದ್ದಾರೆ. ಅಸ್ವಸ್ಥಗೊಂಡಿದ್ದನ್ನು ಕಂಡ ಸ್ಥಳದಲ್ಲಿದ್ದ ಇತರೆ ಪೌರ ಕಾರ್ಮಿಕರು ಮಣ್ಣು ತಗೆದು ಅಶೋಕ ಅವರನ್ನು ಹೊರತೆಗೆದಿದ್ದಾರೆ. ಈ ವೇಳೆ ಕಾರ್ಮಿಕನ ಪ್ರಜ್ಞೆ ತಪ್ಪಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಾರ್ಮಿಕನನ್ನು ತುರ್ತು ಚಿಕಿತ್ಸೆಗಾಗಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೌರ ಕಾರ್ಮಿಕರ ಸಮಯ ಪ್ರಜ್ಞೆಯಿಂದಾಗಿ ಅಶೋಕ್ನನ್ನು ಆಸ್ಪತ್ರೆ ಸಾಗಿಸಲಾಗಿದೆ. ಇಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.