ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಇನ್ನೂ ದೊಡ್ಡ ತಿಮಿಂಗಿಲಗಳನ್ನು ಹಿಡಿಯುವವರೆಗೂ ನಾನು ಮಾಹಿತಿಯನ್ನು ನೀಡುತ್ತೇನೆ. ಸಣ್ಣ ಮೀನುಗಳ ಬಂಧನ ಮಾತ್ರ ಆಗಿದೆ ಅಷ್ಟೇ. ಇನ್ನೂ ದೊಡ್ಡ ತನಿಖೆ ನಡೆಯಬೇಕಾಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ಗೆ ಸಿಸಿಬಿ ಅಧಿಕಾರಿಗಳು ಬುಲಾಬ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಮಿಷನರ್ ಕಚೇರಿಗೆ ಹಾಜರಾದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳಿಂದ ಈ ವಿಚಾರವಾಗಿ ತನಿಖೆಗೆ ಸಹಕಾರ ನೀಡುತ್ತಾ ಬಂದಿದ್ದೇನೆ. ನನ್ನ ಸಹಕಾರ ಹೀಗೆ ಮುಂದುವರಿಯುತ್ತದೆ. ಸಿಸಿಬಿ ಅಧಿಕಾರಿಗಳು ಈಗಾಗಲೇ ಕೋಟ್ಯಂತರ ಮೌಲ್ಯದ ಡ್ರಗ್ಸ್, ಗಾಂಜಾ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ನೈಜೀರಿಯನ್ ಪ್ರಜೆಗಳನ್ನು ಬಂಧಿಸಿದ್ದಾರೆ. ಜಾಲ ಎಷ್ಟು ಡೊಡ್ಡದಾಗಿದೆ ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.
ಸಣ್ಣ ಸಣ್ಣ ಮೀನುಗಳನ್ನ ಹಿಡಿದಿದ್ದಾರೆ. ಇನ್ನೂ ದೊಡ್ಡ ತಿಮಿಂಗಿಲಗಳಿವೆ. ಸೆಷನ್ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಿ ಅಂತ ಮನವಿ ಮಾಡಿಕೊಳ್ಳುತ್ತೇನೆ. ವಿರೋಧ ಪಕ್ಷದವರಲ್ಲಿಯೂ ಕೇಳಿಕೊಳ್ಳುತ್ತೇನೆ. ಇದೊಂದು ಸಮಾಜಕ್ಕೆ ಮಾರಕ, ಇದರ ಅಂತ್ಯವಾಗಬೇಕು. ಇದರಿಂದ ಸಮಾಜಕ್ಕೆ ತೊಂದರೆಯಾಗಿದೆ. ಯುವಕರಿಗೆ ಆ ಮಾದಕ ವಸ್ತು ಸಿಕ್ಕಿದ್ರೆ ಏನಾಗುತ್ತೆ ಎಂದು ಊಹೆ ಮಾಡೋಕಾಗಲ್ಲ. ನಾನು ಒಬ್ಬ ನಿರ್ದೇಶಕನಾಗಿ ಸಾಮಾನ್ಯ ವ್ಯಕ್ತಿಯಾಗಿ ಬೇಡಿಕೊಳ್ಳುತ್ತೇನೆ. ನಾನು ಪೊಲೀಸ್ ತನಿಖೆಗೆ ಸಹಾಕರ ನೀಡಿದ್ದೇನೆ ಎಂದು ಹೇಳಿದ್ದಾರೆ.
ಡಿಸಿಪಿ ಬಸವರಾಜ್ ಅವರು ಇಂದು ಸೆಷನ್ ನಲ್ಲಿ ಇರುವ ಕಾರಣದಿಂದಾಗಿ ವಿಚಾರಣೆ ಇಲ್ಲ. ಮತ್ತೊಂದು ದಿನಾಂಕ ತಿಳಿಸೋದಾಗಿ ಹೇಳಿದ್ದಾರೆ. ದಿನಾಂಕ ಸೂಚಿಸಿದ ದಿನ ವಿಚಾರಣೆಗೆ ಬರುತ್ತೇನೆ. ತನಿಖೆಗೆ ಬೇಕಾಗುವ ಸಂಪೂರ್ಣ ಸಹಕಾರವನ್ನು ಕೋಡುತ್ತೇನೆ ಎಂದು ಹೇಳಿದ್ದಾರೆ.