ಚಿಕ್ಕೋಡಿ: ಸಿಎಂ ಸ್ಥಾನ ಬಿಟ್ಟು ಈಗ ಡಿಸಿಎಂ ಆಗುವ ಇಂಗಿತವನ್ನು ಹುಕ್ಕೇರಿ ಬಿಜೆಪಿ ಶಾಸಕ, ಮಾಜಿ ಸಚಿವ ಉಮೇಶ್ ಕತ್ತಿ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಆಗಬೇಕೆಂದು ಬಯಸಿಲ್ಲ ಅವಕಾಶ ಕೊಟ್ಟರೆ ಅದನ್ನು ನಿಭಾಯಿಸುತ್ತೇನೆ ಆದರೆ ಸಚಿವನಾಗುವುದು ನಿಶ್ಚಿತ ಎಂದಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕತ್ತಿ, ನೂರಕ್ಕೆ ನೂರರಷ್ಟು ನಾನು ಸಚಿವನಾಗುತ್ತೇನೆ ಎಂಬ ವಿಶ್ವಾಸವಿದೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಮನೆಯಲ್ಲಿ ಅಣ್ಣ ತಮ್ಮಂದಿರು ಜಗಳವಾಡುವುದು ಸ್ವಾಭಾವಿಕ. ಪೂರ್ಣ ಪ್ರಮಾಣದಲ್ಲಿ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಡುಗೆ ಕೊಡುತ್ತಾರೆ. ಮುಂದೆ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ದೇವೇಗೌಡರು, ಯಡಿಯೂರಪ್ಪ ನನ್ನ ಮೆಚ್ಚಿನ ನಾಯಕರು: ಕೆ.ಎಸ್.ಈಶ್ವರಪ್ಪ
ದೆಹಲಿಗೆ ಹೋಗಿ ನಡ್ಡಾ ಅವರನ್ನು ಭೇಟಿ ಆಗುವುದು ನನ್ನ ಕರ್ತವ್ಯ ಭೇಟಿ ಆಗೋದು ತಪ್ಪಾ? ಎಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ ಉಮೇಶ ಕತ್ತಿ, ಅಮಿತ್ ಶಾ ಸೇರಿದಂತೆ ನಡ್ಡಾ ಅವರನ್ನು ಭೇಟಿ ಆಗಿದ್ದು ನಿಜ. ಅವರು ಅವಕಾಶ ಕೊಟ್ಟರೆ ಸಚಿವನಾಗುತ್ತೇನೆ ಇಲ್ಲವಾದಲ್ಲಿ ಶಾಸಕನಾಗಿ ಮುಂದುವರೆಯುತ್ತೇನೆ ಎಂದರು.
ಪ್ರವಾಹ ಸಂದರ್ಭದಲ್ಲಿ ಶಾಸಕರು ಸಚಿವ ಸ್ಥಾನಕ್ಕೆ ಲಾಬಿ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ನಾನು ಮೂರು ದಿನಗಳಿಂದ ಕ್ಷೇತ್ರದಲ್ಲಿದ್ದು ಸಂತ್ರಸ್ತರ ಸಮಸ್ಯೆ ಆಲಿಸಿದ್ದೇನೆ. ರೈತರು, ಸಂತ್ರಸ್ತರು ತೊಂದರೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆದಿದ್ದೇನೆ. ಪ್ರವಾಹ ಕುರಿತು ಚರ್ಚೆ ನಡೆಸಿ ಸಂತ್ರಸ್ಥರಿಗೆ ಸಹಾಯ ಮಾಡುವ ಕೆಲಸ ಸರ್ಕಾರ ಮಾಡುತ್ತದೆ. ಮುಖ್ಯಮಂತ್ರಿಗಳು ಬಂದು ಪರಿಹಾರ ಘೋಷಣೆ ಮಾಡುತ್ತಾರೆ. 224 ಶಾಸಕರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಹುಕ್ಕೇರಿ ತಾಲೂಕು ಅಧಿಕಾರಿಗಳ ಸಭೆ ನಡೆಸಿ ಪ್ರವಾಹದ ಕುರಿತು ಮಾಹಿತಿ ಪಡೆದು ಸಂತ್ರಸ್ತರಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಡಿ.ಎಚ್.ಹೂಗಾರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಆರೋಗ್ಯಾಧಿಕಾರಿ ಉದಯ ಕುಡಚಿ ಸೇರಿದಂತೆ ತಾಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.