ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದ ಕುರಿತು ಪೊಲೀಸರು ಬಗೆದಷ್ಟು ಸತ್ಯ ಹೊರಗೆ ಬರುತ್ತಿದ್ದು, ಕೆಲ ಆರೋಪಿಗಳು ದೇಶದ್ರೋಹಿಗಳ ಜೊತೆ ಸಂಪರ್ಕದಲ್ಲಿರುವುದು, ಇನ್ನೂ ಕೆಲವರು ದುಷ್ಕೃತ್ಯದಲ್ಲಿ ತೊಡಗಿರುವ ಕುರತ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇದೀಗ ಮತ್ತೊಂದು ಭಯಾನಕ ಸತ್ಯ ಹೊರ ಬಿದ್ದಿದ್ದು, ಡಿಜೆ ಹಳ್ಳಿ ಗಲಭೆ ಪ್ರಕರಣ ಪುಂಡರಿಗೆ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಲಿಂಕ್ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ನಗರದ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ರುವಾರಿಗೆ ಪುಂಡರು ನಿಕಟ ಸಂಬಂಧಿಗಳು ಎಂಬ ಮಾಹಿತಿ ಲಭ್ಯವಾಗಿದೆ.
ಗಲಭೆ ಪ್ರಕರಣದಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿ ಅಫ್ರೀದಿ ಸಹೀದರ ಮೊಹಮದ್ನ್ನು ಪೊಲೀಸರು ಬಂಧಿಸಿದ್ದು, ಅಫ್ರೀದಿಯು ಸಿಯಾವುದ್ದೀನ್, ಮೊಹಮದ್ ಸೇರಿದಂತೆ ಐವರು ಆರೋಪಿಗಳ ಜೊತೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಸದ್ಯ ಬಾಂಬ್ ಬ್ಲಾಸ್ಟ್ ಲಿಂಕ್ ಬಗ್ಗೆ ಸಿಸಿಬಿಯಿಂದ ತನಿಖೆ ಮುಂದುವರಿದಿದ್ದು, ಎಲ್ಲ ರೀತಿಯಿಂದಲೂ ವಿಚಾರಣೆ ನಡೆಸುತ್ತಿದ್ದಾರೆ. ಈ ಮೂಲಕ ಹಿಂದಿನ ಸತ್ಯವನ್ನು ಬಾಯ್ಬಿಡಿಸುತ್ತಿದ್ದಾರೆ.
2014ರ ಡಿಸೆಂಬರ್ ನಲ್ಲಿ ಚರ್ಚ್ ಸ್ಟ್ರೀಟ್ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಇದು ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳಿಸಿತ್ತು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಹಲವರನ್ನು ಬಂಧಿಸಿದ್ದರು. ಇದೀಗ ಪ್ರಮುಖ ಆರೋಪಿಯೊಂದಿಗೆ ಈತ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ಬಾಂಬ್ ಬ್ಲಾಸ್ಟ್ ರುವಾರಿ ಸಾರಾಯಿಪಾಳ್ಯದ ಹುಡುಗಿಯನ್ನು ಮದುವೆಯಾಗಿದ್ದ. ಬಳಿಕ ಪರಪ್ಪನ ಅಹ್ರಹಾರದಲ್ಲಿ ಎನ್ಐಎ ಆತನನ್ನು ಬಂಧಿಸಿತ್ತು.