ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಸರ್ಕಾರ ಅಡ್ಡಿಯಾಗಿಲ್ಲ. ಡಿಕೆಶಿ ಸಿಎಂ ಆಗುತ್ತೇನೆ ಎಂದು ಎದೆ ಉಬ್ಬಿಸಿ ಭ್ರಮಲೋಕದಲ್ಲಿ ತೇಲುತ್ತಿದ್ದಾರೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ತುಘಲಕ್ ದರ್ಬಾರ್ ಮಾಡಿದ್ರು. ನಾವು ಆ ರೀತಿ ಮಾಡಿಲ್ಲ, ಪದಗ್ರಹಣಕ್ಕೆ ಅಡ್ಡಿಯಾಗಿಲ್ಲ. ಪೈಲ್ವಾನ್ ರೀತಿ ಎದೆಯುಬ್ಬಿಸಿ ಡಿಕೆಶಿ ಮುಂದೆ ಬರುತ್ತಿದ್ದಾರೆ ಎಂದರು.
ನಿಯಮಾನುಸಾರ ಮಾಡಿಕೊಳ್ಳಲಿ ಯಾರು ಬೇಡ ಎನ್ನುತ್ತಾರೆ. ಮೊಸರಲ್ಲಿ ಕಲ್ಲು ಹುಡುಕುವುದನ್ನು ಕಾಂಗ್ರೆಸ್ ಬಿಡಲಿ. ಬೇರೆ ಅಧ್ಯಕ್ಷರ ಆತಂಕರಿಕ ವಿಚಾರಕ್ಕೆ ತಲೆ ಹಾಕಲ್ಲ. ಅದ್ಧೂರಿ ಕಾರ್ಯಕ್ರಮ ಬಿಟ್ಟು ಸರಳವಾಗಿ ಮಾಡಲಿ ಯಾರು ಬೇಡ ಅನ್ನಲ್ಲ ಎಂದು ಟಾಂಗ್ ನೀಡಿದರು.
ಈ ಹಿಂದೆ ಮಾತನಾಡಿದ್ದ ಡಿಕೆಶಿ, ಕೆಪಿಸಿಸಿ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕಾರ ಮಾಡಲು ಅಡ್ಡಿಯಾಗುತ್ತಿದ್ದು, ಇದೊಂದು ರಾಜಕೀಯ ಹುನ್ನಾರ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.