ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿಯನ್ನು ವಿರೋಧಿ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಮನೆಯ ಮುಂದೆ ಹೈಡ್ರಾಮಾ ಮಾಡಿದ್ದಾರೆ. ಬಿಜೆಪಿ ಸರ್ಕಾರ ರಾಜಕೀಯವಾಗಿ ಸಿಬಿಐ ದಾಳಿ ಮಾಡಿಸುತ್ತಿದೆ. ಇದನ್ನು ನೀವು ನಿಲ್ಲಿಸಬೇಕು. ಬಿಜೆಪಿ ಈ ರೀತಿ ಪದೇ ಪದೇ ರಾಜಕೀಯ ಪ್ರೇರಿತ ದಾಳಿಯನ್ನು ಮಾಡಿಸುತ್ತಿದೆ ಎಂದು ಆಕ್ರೋಶಗೊಂಡ ಕಾರ್ಯಕರ್ತರು ಡಿಕೆಶಿ ಮನೆಯ ಮುಂದೆ ಪೊಲೀಸರನ್ನು ತಳ್ಳುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ ಮನೆಯಲ್ಲಿದ್ದ 50 ಲಕ್ಷ ಹಣ ಸೀಜ್?
ಈ ವೇಳೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ಕೊನೆಗೆ ಪೊಲೀಸರು ಪ್ರತಿಭಟನೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಇತ್ತ ಇಂದು ವಿವಿಧ ಕಾಯ್ದೆಗಳ ಜಾರಿ ಖಂಡಿಸಿ ಮತ್ತು ಹತ್ರಾಸ್ ಘಟನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಇತ್ತು. ಆದರೆ ಇದೀಗ ಕಾಂಗ್ರೆಸ್ ಭವನದಲ್ಲಿ ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಡಿಕೆಶಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಡಿಕೆಶಿ ಮೇಲೆ ಸಿಬಿಐ ದಾಳಿ ಖಂಡಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮೌರ್ಯ ಸರ್ಕಲ್ ಬಳಿಯ ಯೂತ್ ಕಾಂಗ್ರೆಸ್ ಬಿಲ್ಡಿಂಗ್ ಕಚೇರಿ ಬಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಹಠಾವೊ ಎಂದು ಘೋಷಣೆ ಕೂಗುತ್ತಾ ಸಿಬಿಐ ದಾಳಿಯನ್ನು ಖಂಡಿಸುತ್ತಿದ್ದಾರೆ. ಸೇಡಿನ ರಾಜಕಾರಣ ಮಾಡುತ್ತಿರುವ ಪ್ರಧಾನಿ ಮತ್ತು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ. ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಹರಿಪ್ರಸಾದ್, ಎಚ್.ಎಂ.ರೇವಣ್ಣ, ಉಗ್ರಪ್ಪ ಮತ್ತು ಚಂದ್ರಪ್ಪ ಆಗಮಿಸಿದ್ದಾರೆ.
ಇತ್ತ ಕಾಂಗ್ರೆಸ್ ಭವನದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡಿಕೆಶಿ ಬೆಳವಣಿಗೆ ಸಹಿಸದೇ ಇರೋರು ಈ ರೀತಿ ಮಾಡುತ್ತಿದ್ದಾರೆ. ಎಲ್ಲರ ಬಳಿಯೂ ಆಸ್ತಿ ಇದ್ದೇ ಇರುತ್ತೆ. ಆದರೆ ವಿರೋಧ ಪಕ್ಷದವರು ಹೀಗೆ ಮಾಡಿಸುತ್ತಿದ್ದಾರೆ. ನಾವು ಡಿಕೆಶಿಗೆ ಧೈರ್ಯ ತುಂಬಲು ಬಂದಿದ್ದೇವೆ ಎಂದು ಡಿಕೆಶಿ ಅಭಿಮಾನಿಗಳು ಹೇಳಿದ್ದಾರೆ.