ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಮೊಮ್ಮಗನ ಮದುವೆ ಮಾತುಕತೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಎಸ್.ಎಂ.ಕೆ ಕುಟುಂಬ ಆಗಮಿಸಿದೆ.
ಮೂರು ದಿನಗಳ ಹಿಂದೆಯಷ್ಟೇ ಎಸ್ಎಂಕೆ ನಿವಾಸಕ್ಕೆ ಡಿಕೆಶಿ ಕುಟುಂಬ ಹೋಗಿದ್ದರು. ಇದೀಗ ಸಿದ್ಧಾರ್ಥ ಪುತ್ರ ಅಮರ್ಥ್ಯ ಸುಬ್ರಮಣ್ಯ, ಎಸ್.ಎಂ. ಕೃಷ್ಣ ದಂಪತಿ ಸೇರಿದಂತೆ ಕುಟುಂಬ ವರ್ಗ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ಕೊಟ್ಟಿದ್ದಾರೆ. ಹೀಗಾಗಿ ಎಸ್.ಎಂ.ಕೆ ಕುಟುಂಬವನ್ನ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡಿದ್ದಾರೆ.
ಡಿಕೆಶಿ ಪುತ್ರಿ ಐಶ್ವರ್ಯ ಹಾಗೂ ಉದ್ಯಮಿ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸುಬ್ರಮಣ್ಯ ವಿವಾಹ ಸಂಬಂಧ ಎರಡು ಕುಟುಂಬಗಳು ಮಾತುಕತೆ ನಡೆಸಿವೆ. ಎರಡು ಕುಟುಂಬಗಳ ಮಾತುಕತೆಯ ಎಕ್ಸ್ ಕ್ಲೂಸಿವ್ ಫೋಟೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದೇ ತಿಂಗಳ 12 ರಂದು ಡಿ.ಕೆ.ಶಿವಕುಮಾರ್ ಕುಟುಂಬದವರು ಸದಾಶಿವನಗರದ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿ ಮದುವೆ ಮಾತುಕತೆ ನಡೆಸಿದ್ದರು.
ಬಹುತೇಕ ಮಾತುಕತೆ ಮುಗಿದಿದ್ದು, ಆಷಾಢ ಕಳೆದ ನಂತರ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಸುವ ಸಂಬಂಧ ಮಾತುಕತೆ ನಡೆದಿದೆ. ಆಗಸ್ಟ್ ತಿಂಗಳಿನಲ್ಲಿ ಒಳ್ಳೆಯ ದಿನ ನೋಡಿ ನಿಶ್ಚಿತಾರ್ಥದ ದಿನಾಂಕ ನಿಗದಿ ಆಗಲಿದೆ. ಬಹುತೇಕ ಡಿಸೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.
ಈ ಮಾತುಕತೆಯಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬದ ಜೊತೆಗೆ, ಸಂಸದ ಡಿ.ಕೆ.ಸುರೇಶ್, ಶಾಸಕ ರಂಗನಾಥ್ ಕುಟುಂಬ ಸಹ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿದ್ದರು. ಒಂದು ಗಂಟೆಯ ಕಾಲ ಮಾತುಕತೆ ನಡೆದಿದ್ದು, ತಾಂಬೂಲ ಬದಲಿಸಿಕೊಳ್ಳಲಾಗಿದೆ.