ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಗಳಿಗೆ ಕಂಕಣ ಭಾಗ್ಯ ಕೂಡಿ ಬರಲು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿಯೇ ಕಾರಣ ಎಂದು ಹೇಳಲಾಗ್ತಿದೆ.
ವಿನಯ್ ಗುರೂಜಿ ಒಪ್ಪಿಗೆ ಸೂಚಿಸಿದ ಮೇಲೆಯೇ ಡಿ.ಕೆ ಶಿವಕುಮಾರ್ ಮಗಳ ಮದುವೆ ಮಾತುಕತೆಯ ಕುರಿತು ಮುಂದುವರಿದಿದ್ದಾರೆ. ಮಾರ್ಚ್ 19 ರಂದು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರ ಮಗಳ ಮದುವೆ ನಡೆದಿತ್ತು. ಅಂದು ಮದುವೆ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಕೂಡ ಬಂದಿದ್ದರು. ಆಗ ಡಿಕೆಶಿ ಈ ವಿಚಾರವಾಗಿ ಪ್ರಸ್ತಾಪ ನಡೆಸಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಾಫಿ ಉದ್ಯಮಿ ದಿವಂಗತ ಸಿದ್ಧಾರ್ಥ್ ಹೆಗ್ಡೆಯವ ಹಿರಿಯ ಪುತ್ರನೊಂದಿಗೆ ಮಗಳ ಮದುವೆ ಬಗ್ಗೆ ಮಾತುಕತೆ ನಡೆಸಲು ವಿನಯ್ ಗುರೂಜಿ ಬಳಿ ಡಿಕೆಶಿ ಸಲಹೆ ಕೇಳಿದ್ದರು. ಈ ವೇಳೆ ವಿನಯ್ ಗುರೂಜಿ ಕೂಡ ಮುಂದುವರಿಯಿರಿ ಎಂದಿದ್ದರಂತೆ. ವಿನಯ್ ಗುರೂಜಿ ಒಪ್ಪಿಗೆ ಸೂಚಿಸಿದೆ ಮೇಲೆಯೇ ಡಿಕೆಶಿ ತಮ್ಮ ಮಗಳನ್ನ ಸಿದ್ಧಾರ್ಥ್ ಹೆಗ್ಡೆ ಮಗನಿಗೆ ಕೊಡಲು ಮುಂದಾಗಿ ಮಾತುಕತೆ ನಡೆಸಿದ್ದಾರೆ. ಈಗ ಇಬ್ಬರ ಮದುವೆ ಮಾತುಕತೆಯೂ ಮುಗಿದಿರೋದ್ರಿಂದ ಡಿಕೆಶಿ ಫೋನ್ ಮೂಲಕ ವಿನಯ್ ಗುರೂಜಿಗೆ ಮದುವೆ ಮಾತುಕತೆಯ ಬಗ್ಗೆ ತಿಳಿಸಿದ್ದು, ನಿಮ್ಮ ಸಲಹೆ ಹಾಗೂ ಆಶೀರ್ವಾದಂತೆ ಎಲ್ಲಾ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ಗುರೂಜಿಯ ಪರಮಭಕ್ತ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿಯ ಪರಮಭಕ್ತ. ಇತ್ತೀಚೆಗೆ ಅಂದರೆ ಕಳೆದ ಎರಡ್ಮೂರು ವರ್ಷಗಳಲ್ಲಿ ಅವರು ಜಿಲ್ಲೆಗೆ ಬಂದಾಗೆಲ್ಲಾ ವಿನಯ್ ಗುರೂಜಿಯನ್ನ ಭೇಟಿ ಮಾಡಿಯೇ ಹೋಗಿದ್ದರು. ವಿನಯ್ ಗುರೂಜಿಯ ಆಶ್ರಮದಲ್ಲಿ ಕೆಲ ಪೂಜೆಯನ್ನೂ ನಡೆಸಿದ್ದರು. ಅವರು ಸಚಿವರು ಆಗಿದ್ದಾಗ ಒಮ್ಮೆ ಜಿಲ್ಲೆಗೆ ಬಂದಿದ್ದರು. ಆಗ ಶರ್ಮಾ ಟ್ರಾವೆಲ್ಸ್ ಮುಖ್ಯಸ್ಥರು ಅವರ ಜೊತೆಗಿದ್ದರು. ಅಂದು ವಿನಯ್ ಗುರೂಜಿ ಶರ್ಮಾಗೆ ಹೇಳಿದ ಮಾತು ಕೇಳಿ ಡಿಕೆಶಿ ಹೌದೇನ್ರಿ, ನನಗೆ ಗೊತ್ತಿಲ್ಲ ಎಂದಿದ್ದರಂತೆ. ಅಂದು ಡಿಕೆಶಿ ಕೈಗೆ ಒಂದು ತೆಂಗಿನ ಕಾಯಿ ಕೊಟ್ಡಿದ್ದ ವಿನಯ್ ಗುರೂಜಿ ಡಿಕೆಶಿಗೆ “ಎಷ್ಟು ದೂರ ಹೋಗಬೇಕು ಅನ್ನಿಸುತ್ತೋ ಅಷ್ಟು ದೂರ ಹೋಗಿ ಹೊಡೆದು ಬನ್ನಿ” ಎಂದಿದ್ದರಂತೆ.
ತೆಂಗಿನ ಕಾಯಿಯನ್ನ ಹೊಡೆದು ಬಂದ ಮೇಲೆ ಶುಭವಾಗುತ್ತೆ ಹೋಗಿ ಎಂದಿದ್ದರಂತೆ. ಡಿಕೆಶಿ ಜೈಲು ವನವಾಸ ಮುಗಿಸಿ ಬಂದ ಮೇಲೂ ನೀವು ಕೆಪಿಸಿಸಿ ಅಧ್ಯಕ್ಷ ಆಗ್ತೀರಾ ಎಂದಿದ್ದರಂತೆ. ಕಳೆದ ಎರಡ್ಮೂರು ವರ್ಷಗಳಿಂದ ವಿನಯ್ ಗುರೂಜಿಯವರ ಪರಮಭಕ್ತರಾಗಿರೋ ಡಿಕೆಶಿ ವಿನಯ್ ಗುರೂಜಿಯವರ ಅನುಮತಿ ಇಲ್ಲದೆ ಯಾವ ಕೆಲಸವನ್ನೂ ಮಾಡೋದಿಲ್ಲ ಅನ್ನೋದಕ್ಕೆ ಮಗಳ ಮದುವೆಯ ಮಾತುಕತೆಯೇ ಸಾಕ್ಷಿ.