ಉಡುಪಿ: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕೊರೊನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಡಿಕೆಶಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ತಮ್ಮ ನೆಚ್ಚಿನ ನಾಯಕನಿಗೆ ಕೊರೊನಾ ಬಂದಾಗ ಶೀಘ್ರವಾಗಿ ಗುಣಮುಖವಾಗಲಿ ಎಂದು ಡಿಕೆಶಿ ಅಭಿಮಾನಿಗಳು ಹರಕೆ ಹೊತ್ತಿದ್ದರು.
ಈಗ ಕ್ಷೇತ್ರದಲ್ಲಿ ಸೇವೆಗಳು ಆರಂಭವಾದ ಕಾರಣ ಕ್ಷೇತ್ರಕ್ಕೆ ಆಗಮಿಸಿ ದೇವಿಗೆ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ತಮ್ಮ ನಾಯಕನಿಗೆ ತೀರ್ಥ ಪ್ರಸಾದವನ್ನು ಪಡೆದುಕೊಂಡು ಹೋಗಿದ್ದಾರೆ.
ಡಿಕೆ ಶಿವಕುಮಾರ್ ಅವರು ಬಹಳ ಹಿಂದಿನಿಂದಲೂ ಕೂಡ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಭಕ್ತರು. ಹೀಗಾಗಿ ವರ್ಷಕ್ಕೆ ಒಂದೆರಡು ಬಾರಿಯಾದರೂ ಮೂಕಾಂಬಿಕಾ ದೇವಿಯ ದರ್ಶನವನ್ನು ಮಾಡಿಕೊಂಡು ಬರುತ್ತಿದ್ದಾರೆ. ಈಗ ಅವರಿಗೆ ಅನಾರೋಗ್ಯ ಸಾಧಿಸಿರುವ ಹಿನ್ನೆಲೆಯಲ್ಲಿ ಬೆಂಬಲಿಗರು ಬಂದು ಪೂಜೆಯನ್ನು ಸಲ್ಲಿಸಿದ್ದಾರೆ. ಅವರ ಆರೋಗ್ಯ ಶೀಘ್ರ ಗುಣಮುಖ ಆಗಲಿ ಎಂದು ನಾವು ಕೂಡ ಪ್ರಾರ್ಥನೆಯನ್ನು ಮಾಡಿದ್ದೇವೆ ಎಂದು ದೇವಸ್ಥಾನದ ಅರ್ಚಕರು ಮಾಹಿತಿ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಅನಾರೋಗ್ಯ ಪೀಡಿತರಾದಾಗ ನಾವು ಹರಕೆಯನ್ನು ಹೇಳಿಕೊಂಡಿದ್ದೆವು. ಅಂದು ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಇರಲಿಲ್ಲ. ಈಗ ಸೇವೆಗಳು ಆರಂಭವಾಗಿದೆ. ಹಾಗಾಗಿ ಬಂದು ನಾವು ಪೂಜೆಯನ್ನು ಸಲ್ಲಿಕೆ ಮಾಡಿದ್ದೇವೆ ಎಂದು ಅಭಿಮಾನಿ ಹೇಳಿದ್ದಾರೆ.