ಬೆಂಗಳೂರು: ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಮಧ್ಯಂತರ ವರದಿ ನೀಡಿದ ಬೆನ್ನಲ್ಲೇ ವರದಿಯ ಶಿಫಾರಸು ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ತಜ್ಞರ ನೀಡಿರುವ ಸಲಹೆ, ಶಿಫಾರಸುಗಳನ್ನ 45 ದಿನಗಳಲ್ಲಿ ರಾಜ್ಯಾದ್ಯಂತ ಅನುಷ್ಠಾನ ಮಾಡೋದಾಗಿ ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ವರದಿ ಅನುಷ್ಠಾನ ಕುರಿತು ಮಾತನಾಡಿದ ಅವರು, ನಿನ್ನೆ ಡಾ. ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ ಸಮಿತಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ ಮಾಡಿದೆ. 92 ಪುಟಗಳ ವರದಿಯಲ್ಲಿ ಅನೇಕ ಶಿಫಾರಸುಗಳನ್ನು ಮಾಡಿದೆ. ಸಮಿತಿಯ ಶಿಫಾರಸು ಅನುಷ್ಠಾನ ಮಾಡಲು ಸರ್ಕಾರ ಪ್ರಕ್ರಿಯೆ ಪ್ರಾರಂಭ ಮಾಡಿದೆ. 45 ದಿನಗಳಲ್ಲಿ ತಜ್ಞರು ಕೊಟ್ಟ ಶಿಫಾರಸನು ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: 2 ಕೋಟಿ ಲಸಿಕೆ ನೀಡಿ ಇತಿಹಾಸ ನಿರ್ಮಿಸಿದ ಕರ್ನಾಟಕ: ಸುಧಾಕರ್
ಸಂಭಾವ್ಯ ಕೊರೊನಾ 3ನೇ ಅಲೆ ತಡೆಗಟ್ಟಲು ರಚಿಸಿರುವ ತಜ್ಞರ ಸಮಿತಿಯೊಂದಿಗೆ ಮಾನ್ಯ ಮುಖ್ಯಮಂತ್ರಿ @BSYBJP ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸಮಿತಿಯು ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿತು. ಸಮಿತಿಯ ಅಧ್ಯಕ್ಷರಾದ ಡಾ.ದೇವಿ ಶೆಟ್ಟಿ, ಸದಸ್ಯರು, ಸಚಿವ ಶ್ರೀ @BSBommai ಉಪಸ್ಥಿತರಿದ್ದರು. pic.twitter.com/tDGxedS4TQ
— Dr Sudhakar K (@mla_sudhakar) June 22, 2021
ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಕೇರ್ ಸೆಂಟರ್ ಪ್ರಾರಂಭ, ವೈದ್ಯರು, ಸಿಬ್ಬಂದಿ ನೇಮಕ ಪ್ರಕ್ರಿಯೆ, ಐಸಿಯು ಬೆಡ್, ಆಕ್ಸಿಜನ್ ಬೆಡ್ ಹೆಚ್ಚಳ ಮಾಡುವುದು. ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವುದು ಸೇರಿದಂತೆ ಅನೇಕ ಶಿಫಾರಸುಗಳನ್ನ ಸಮಿತಿ ಮಾಡಿತ್ತು. ಸಮತಿ ವರದಿಯನ್ನು ಪ್ರತಿ ಜಿಲ್ಲೆಗಳಲ್ಲೂ ಅನುಷ್ಠಾನ ಮಾಡಲು ಕ್ರಮವಹಿಸಲಾಗುತ್ತೆ. ತಜ್ಞರ ಎಲ್ಲಾ ಸಲಹೆ, ಶಿಫಾರಸುಗಳನ್ನ ರಾಜ್ಯ ಸರ್ಕಾರ ಸಮರ್ಪಕವಾಗಿ ಅನುಷ್ಠಾನ ಮಾಡುವ ಕೆಲಸ ಮಾಡಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಖಾಸಗಿ ಆಸ್ಪತ್ರೆಗಳ ಬೆಡ್ ವಾಪಸ್:
ಕೊರೊನಾ ತೀವ್ರತೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಂದ ಪಡೆದಿದ್ದ ಬೆಡ್ಗಳನ್ನು ತಾತ್ಕಾಲಿಕವಾಗಿ ಆಸ್ಪತ್ರೆಗಳಿಗೆ ವಾಪಸ್ ನೀಡಲು ಸರ್ಕಾರ ತೀರ್ಮಾನ ಮಾಡಿದೆ ಎಂದೂ ಅವರು ಇದೇ ವೇಳೆ ತಿಳಿಸಿದರು. ಕೊರೊನಾ ಕೇಸ್ ಕಡಿಮೆ ಆಗಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಬೆಡ್ ಸದ್ಯಕ್ಕೆ ಕೊಡೋದು ಬೇಡ. ಮುಂದೆ ಏನಾದ್ರೂ ಕೇಸ್ ಹೆಚ್ಚಳ ಆದ್ರೆ, ಸರ್ಕಾರಕ್ಕೆ ಬೆಡ್ ಬೇಕು ಎಂದು ಕೇಳಿದ್ರೆ ಆಗ ಖಾಸಗಿ ಆಸ್ಪತ್ರೆಗಳು ಬೆಡ್ ಕೊಡಬೇಕು. ಸದ್ಯ ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗುತ್ತೆ ಎಂದು ಸಚಿವರು ತಿಳಿಸಿದರು.