ಬೆಂಗಳೂರು: ಗಾಯಕರಾಗಿ ಬಿಡುವಿಲ್ಲದ ದಿನಗಳಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೆಲಸ ಮಾಡುತ್ತಿದ್ದರು.
ಹೌದು ಕೇವಲ ಗಾಯಕರಾಗಿ ಮಾತ್ರವಲ್ಲ ಡಬ್ಬಿಂಗ್ ಆರ್ಟಿಸ್ಟ್ ಆಗಿ, ಕಲಾವಿದರಾಗಿ ಸಹ ಎಸ್ಪಿಬಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕೆ.ಬಾಲಂಚಂದರ್ ನಿರ್ದೇಶನದ ಮನ್ಮಥಲೀಲ ಸಿನಿಮಾದಲ್ಲಿ ಕಮಲ್ ಹಾಸನ್ ಗಂಟಲು ಕೈಕೊಟ್ಟ ಹಿನ್ನೆಲೆಯಲ್ಲಿ ಎಸ್ಪಿಬಿ ಡಬ್ಬಿಂಗ್ ಆರ್ಟಿಸ್ಟ್ ಆಗಬೇಕಾಯ್ತು. ಮುಂದೆ ರಜಿನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಕೆ.ಭಾಗ್ಯರಾಜ್, ಅನಿಲ್ ಕಪೂರ್, ಗಿರೀಶ್ ಕಾರ್ನಾಡ್, ಜೆಮಿನಿ ಗಣೇಶನ್, ಅರ್ಜುನ್ ಸರ್ಜಾ, ರಘುವರನ್, ಸುಮನ್ ಸೇರಿ ಹಲವರಿಗೆ ಧ್ವನಿ ಆಗಿದ್ದರು.
ದಶಾವತಾರಂ ಸಿನಿಮಾದಲ್ಲಿ ಕಮಲ್ ಹಾಸನ್ ಅವರ ಏಳು ಪಾತ್ರಗಳಿಗೆ ಎಸ್ಪಿಬಿ ಡಬ್ಬಿಂಗ್ ಹೇಳಿದ್ದು ವಿಶೇಷ. ಅನ್ನಮಯ್ಯ ಸಿನಿಮಾದಲ್ಲಿ ಸುಮನ್ಗೆ ಡಬ್ಬಿಂಗ್ ಹೇಳಿದ್ದ ಬಾಲುಗೆ ಉತ್ತಮ ಡಬ್ಬಿಂಗ್ ಆರ್ಟಿಸ್ಟ್ ಎಂದು ನಂದಿ ಅವಾರ್ಡ್ ನೀಡಲಾಗಿತ್ತು. ಗಾಂಧಿ ಸಿನಿಮಾದಲ್ಲಿ ಲೀಡ್ ರೋಲ್ನಲ್ಲಿ ನಟಿಸಿದ್ದ ಕಿಂಗ್ ಬೆನ್ಸ್ಲೇಗೂ ಎಸ್ಪಿಬಿ ಡಬ್ಬಿಂಗ್ ಹೇಳಿದ್ದರು. ಈ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು.
ಎಸ್ಪಿಬಿಯೊಳಗಿನ ನಟ
ತೆರೆ ಹಿಂದೆ ಗಾಯಕನಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೋಟಿ ಕೋಟಿ ಅಭಿಮಾನಿಗಳನ್ನು ರಂಜಿಸಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಟನಾಗಿ ಸಹ ಹಲವು ಭಾಷೆಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಕನ್ನಡದಲ್ಲಿ ಬಾಳೊಂದು ಚದುರಂಗ, ತಿರುಗುಬಾಣ, ಸಂದರ್ಭ, ಹುಲಿಯಾ, ಮುದ್ದಿನ ಮಾವ, ನಾನು ನನ್ನ ಹೆಂಡ್ತಿ, ಮಾಂಗಲ್ಯಂ ತಂತುನಾನೇನಾ, ಹೆತ್ತರೆ ಹೆಣ್ಣನ್ನೇ ಹೇರಬೇಕು, ಮಹಾ ಎಡಬಿಡಂಗಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ತೆಲುಗಿನಲ್ಲಿ ಮಿಥುನಂ, ಪವಿತ್ರಬಂಧಂ ಸೇರಿ ನೂರಾರು ಸಿನಿಮಾಮಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಎಸ್ಪಿಬಿ ಬಣ್ಣ ಹಚ್ಚಿದ್ದು ತೆಲುಗಿನ ದೇವದಾಸು ಸಿನಿಮಾಗೆ.