ಬೆಂಗಳೂರು: ನೆಟ್ಟಿಗರೊಬ್ಬರು ಟ್ವಿಟ್ಟರ್ ಮೂಲಕ ನೀಡಿದ ದೂರಿಗೆ ಟ್ವಿಟ್ಟರ್ ನಲ್ಲೇ ಪ್ರತಿಕ್ರಿಯಿಸುವ ಮೂಲಕ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಸಮಸ್ಯೆಯನ್ನು ಬಗೆಹರಿಸಿದೆ.
ಬಳಕೆದರಾದ ಸುದರ್ಶನ್ ಡಿ.ಟಿ ಎಂಬವರು ಜನರು ಬಸ್ ಇಲ್ಲದೇ ಲಾರಿ ಮತ್ತು ಕಾರುಗಳನ್ನು ಹಿಡಿದು ಪ್ರಯಾಣ ಬೆಳೆಸುತ್ತಿರುವ ವಿಡಿಯೋವನ್ನು ಹಾಕಿದ್ದರು. ಇದು ಚಿತ್ರದುರ್ಗ ತಾಲೂಕಿನ ಸಿರಿಗೆರೆ ಕ್ರಾಸ್ ಬಳಿಯ ದೃಶ್ಯ. ಚಿತ್ರದುರ್ಗ ಹಾಗೂ ದಾವಣಗೆರೆ ವಿಭಾಗದ ಎಲ್ಲಾ ವೇಗದೂತ ಬಸ್ಸುಗಳು ಇಲ್ಲಿ ನಿಲ್ಲಿಸಿ ಹೋಗಬೇಕು. ಆದರೆ ನಿಲ್ಲಿಸುತ್ತಿಲ್ಲ ಎಂದು ದೂರು ನೀಡಿದ್ದರು.
https://twitter.com/sudharshana_dt/status/1301011834779041793
ಮೊದಲೆಲ್ಲ ಸ್ನೇಹಮಯಿ ಬಸ್ಸುಗಳು ಓಡಾಡುತ್ತಿದ್ದವು ಈಗ ಸ್ನೇಹಮಯಿಗಳ ಸಂಖ್ಯೆಗಳನ್ನು 2ಕ್ಕೆ ಇಳಿಸಲಾಗಿದೆ. ಈಗಾಗಲೇ ಬೆಂಗಳೂರಿನಿಂದ ಬರುವ ಎಲ್ಲಾ ಬಸ್ಸುಗಳು ದಾವಣಗೆರೆ ಮೇಲೆಯೇ ಸಂಚಾರ ಮಾಡುತ್ತಿದ್ದು ಅವುಗಳು ವೇಗದೂತ ಬಸ್ ಆಗಿವೆ. ಹಿಂದೆ ಇದ್ದ ಎಲ್ಲಾ ಸ್ನೇಹಮಯಿ ಬಸ್ಸುಗಳನ್ನು ಈಗ ಚಿತ್ರದುರ್ಗ-ದಾವಣಗೆರೆ ನಾನ್ ಸ್ಟಾಪ್ ಆಗಿ ಮಾಡಿದ್ದಾರೆ ಎಂದು ಬರೆದು ಸುದರ್ಶನ್ ಪಬ್ಲಿಕ್ ಟಿವಿ ಮತ್ತು ಕೆ.ಎಸ್.ಆರ್.ಟಿ.ಸಿಯನ್ನು ಟ್ಯಾಗ್ ಮಾಡಿ ತಿಳಿಸಿದ್ದರು.
— KSRTC (@KSRTC_Journeys) September 9, 2020
ಚಿತ್ರದುರ್ಗ ಬಸ್ ನಿಲ್ದಾಣದಿಂದ ಸಿರಿಗೆರೆ ಕ್ರಾಸ್ ಬಲಿ ಸ್ಟಾಪ್ ಕೇಳಿದರೆ ವೇಗದೂತ ಬಸ್ ನಿರ್ವಾಹಕರು ನಿಯಂತ್ರಕರ ಎದುರೇ ನಿಲ್ಲಿಸುವುದಿಲ್ಲ. ನಿರ್ವಾಹಕರು ಸಹ ಅದನ್ನೇ ಬೆಂಬಲಿಸುತ್ತಾರೆ. ನಿರ್ವಾಹಕರಿಗೆ ಹೆಚ್ಚಿನ ಬಸ್ ಬಿಡಲು ಕೇಳಿಕೊಂಡಾಗ, ಮ್ಯಾನೇಜರ್ ಗಳನ್ನು ದೂರುತ್ತಾರೆ. ಚಿತ್ರದುರ್ಗ ಹಾಗೂ ದಾವಣಗೆರೆ ಇಬ್ಬರು ಡಿಪೋ ಮ್ಯಾನೇಜರ್ ಗಳಿಗೆ ಫೋನ್ ಮಾಡಿ ನಾಲ್ಕೈದು ಬಾರಿ ದೂರು ಕೊಡಲಾಗಿದೆ. ಒಬ್ಬರ ಮೇಲೆ ಒಬ್ಬರು ದೂರುತ್ತಾರೆ. ಜನರು ಲಾರಿ, ಆಟೋಗಳಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಇದರಿಂದ ಜನರ ಜೀವಕ್ಕೆ ಸಮಸ್ಯೆಯಾದರೆ ಯಾರು ಹೊಣೆ ಎಂದು ಖಾರವಾಗಿ ಬರೆದು ಟ್ವೀಟ್ ಮಾಡಿದ್ದರು.
ಇದಕ್ಕೆ ಉತ್ತರಿಸಿರುವ ಕೆ.ಎಸ್.ಆರ್.ಟಿ.ಸಿ ಕೊರೊನಾ ಕಾರಣದಿಂದ ಆ ಮಾರ್ಗದ ಎಲ್ಲ ಬಸ್ಸುಗಳನ್ನು ನಾನ್ ಸ್ಟಾಪ್ ಆಗಿ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ದಾವಣಗೆರೆ ಮತ್ತು ಚಿತ್ರದುರ್ಗ ಬಸ್ ನಿಲ್ದಾಣಕ್ಕೆ ಬೆಳಗ್ಗೆ 7ರಿಂದ ಸಂಜೆ 7.30ರ ವರೆಗೆ ಸ್ನೇಹಮಹಿ ಬಸ್ಸುಗಳನ್ನು ಬಿಡಲಾಗಿದೆ. ಪ್ರಯಾಣಿಕರು ಇದನ್ನು ಉಪಯೋಗಿಸಿಕೊಂಡು ಸಹಕರಿಸಬೇಕು ಎಂದು ಹೇಳಿದೆ.