ಬೆಂಗಳೂರು: ಕಳೆದ ಶುಕ್ರವಾರದಿಂದ ಕಾಣೆಯಾಗಿದ್ದ 49 ವರ್ಷದ ಮಹಿಳೆ ತಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ಟ್ಯಾಂಕಿನಲ್ಲಿ ಶವವಾಗಿ ಭಾನುವಾರ ಪತ್ತೆಯಾಗಿದ್ದಾರೆ. ಈ ಘಟನೆ ಯಲಹಂಕದ ನ್ಯೂಟೌನ್ ನಡೆದಿದೆ.
ಇತ್ತ ಅಪಾರ್ಟ್ಮೆಂಟ್ ನಿವಾಸಿಗಳು ಅದೇ ಟ್ಯಾಂಕಿನ ನೀರು ಬಳಸುತ್ತಿದ್ದರು. ಹೀಗಾಗಿ ಯಾಕೋ ನೀರು ವಾಸನೆ ಬರುತ್ತಿದೆ ಎಂದು ಪ್ಲಂಬರ್ ನನ್ನು ಕರೆಸಿದ್ದಾರೆ. ಈ ವೇಳೆ ಟ್ಯಾಂಕಿನಲ್ಲಿ ಮಹಿಳೆಯ ಶವ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಮೃತ ಮಹಿಳೆಯನ್ನು ಗೌರಿ ನಾಗರಾಜ್ ಎಮದು ಗುರುತಿಸಲಾಗಿದ್ದು, ಇವರು ಎಸ್ಎಂಐಜಿ ಅಪಾರ್ಟ್ಮೆಂಟಿನ 5ನೇ ಮಹಡಿಯಲ್ಲಿ ವಾಸವಾಗಿದ್ದರು. ಇವರು ರಿಯಲ್ ಎಸ್ಟೇಟ್ ದಲ್ಲಾಳಿಯಾಗಿದ್ದರು.
ಉಪಪೊಲೀಸ್ ಆಯುಕ್ತ ಭೀಮಾಶಂಕರ್ ಎಸ್ ಗುಲ್ಡ್ ಈ ಬಗ್ಗೆ ಮಾತನಾಡಿ, ಆರ್ಥಿಕ ಬಿಕ್ಕಟ್ಟಿನಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಯ ಡೆತ್ ನೋಟ್ ಪತ್ತೆಯಾಗಿದ್ದು, ಈ ಸಂಬಂಧ ಜಯಸೂರ್ಯ ಡೆವಲಪರ್ಸ್ನ ಗೋಪಿ, ಭಾರ್ಗವ್ ಹಾಗೂ ದೇವರಾಜಪ್ಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತ ಗೌರಿ ಪತಿ ಹೆಚ್ಬಿ ನಾಗರಾಜ್ ಅವರು ಜೂನ್ 24 ರಂದು ರಾತ್ರಿ, ಮಧ್ಯಾಹ್ನದ ಬಳಿಕ ನನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದರು. ಡೆತ್ನೋಟ್ನಲ್ಲಿ, ನಾನು ಕೆಲವರಿಂದ ಹಣ ಪಡೆದುಕೊಂಡು ರೆಸೊಡೆನ್ಶಿಯಲ್ ಸೈಟ್ ಕೊಡುವುದಾಗಿ ಭರವಸೆ ನೀಡಿದ್ದೆ. ಬಳಿಕ ಹಣವನ್ನೆಲ್ಲ ಜಯಸೂರ್ಯ ಡೆವಲಪರ್ಸ್ಗೆ ನಿಡಿದ್ದೇನೆ. ಆದರೆ ಬಿಲ್ಡರ್ ಗಳು ಸೈಟ್ ಕೊಡಿಸಲಿಲ್ಲ ಇತ್ತ ಹಣವನ್ನೂ ವಾಪಸ್ ಮಾಡಲಿಲ್ಲ ಎಂದು ಬರೆದಿದೆ. ಈ ಸಂಬಂಧ ಕೆಲವು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಮದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.