-ಯುವಕನ ಎತ್ತಿ ಕಂಬಕ್ಕೆ ಗುದ್ದಿಸಿದ ಕಿರಾತಕರು
-ನಿನ್ನನ್ನ ನಾನಷ್ಟೇ ನೋಡ್ಬೇಕು, ಬೇರೆಯವ್ರು ನೋಡಂಗಿಲ್ಲ
ಕಲಬುರಗಿ: ಟಿಕ್ಟಾಕ್ ಗೆಳತಿಯನ್ನು ಭೇಟಿಯಾಗಲು ಹೋಗಿದ್ದ ಯುವಕನನ್ನು ಸ್ಥಳೀಯ ಕೆಲ ಪುಡಿರೌಡಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯ ಶಿವಾಜಿ ನಗರ ಪಾರ್ಕ್ ನಲ್ಲಿ ನಡೆದಿದೆ.
ಸುರಪುರದ ಭೀಮನಗೌಡ ಹಲ್ಲೆಗೊಳಗಾದ ಯುವಕ. ಅಮರ್, ಚೇತನ್ ಆ್ಯಂಡ್ ಗ್ಯಾಂಗ್ ಭೀಮನಗೌಡ ಮೇಲೆ ಹಲ್ಲೆ ಮಾಡಿ ತಾವೇ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ಟಿಕ್ ಟಾಕ್ ಚೆಲುವೆಗೆ ಕಳಿಸಿದ್ದಾರೆ.
ಟಿಕ್ ಟಾಕ್ ಗೆಳತಿಯನ್ನು ಮಾತನಾಡಿಸಲು ಭೀಮನಗೌಡ ಮುಂದಾಗಿದ್ದಾನೆ. ಇದನ್ನು ನೋಡಿದ ಸುಂದರಿಗೆ ಪ್ರೇಮ ಬಲೆ ಬೀಸುತ್ತಿದ್ದ ರೋಡ್ ರೊಮಿಯೋಗಳಾದ ಅಮರ್ ಮತ್ತು ಚೇತನ್ ಕೋಪ ನೆತ್ತಿಗೇರಿದೆ. ತಮ್ಮ ಪಟಾಲಂ ಮತ್ತು ಕೆಲ ಪುಡಿರೌಡಿಗಳ ಸಹಾಯದಿಂದ ಭೀಮನಗೌಡನನ್ನು ನಗರದ ಶಿವಾಜಿ ಪಾರ್ಕ್ ಗೆ ಎತ್ತಿಕೊಂಡು ಹೋಗಿ ಸಿನಿಮಾ ಶೈಲಿಯಲ್ಲಿ ಥಳಿಸಿದ್ದಾರೆ. ಥಳಿಸಿರುವ ವಿಡಿಯೋಗಳನ್ನು ಟಿಕ್ ಟಾಕ್ ಗೆಳತಿಗೆ ಕಳುಹಿಸಿ, ನಿನ್ನನ್ನು ನಾನಷ್ಟೇ ನೋಡಬೇಕು. ಬೇರೆಯವರು ನೋಡುವ ಹಾಗಿಲ್ಲ ಎಂದು ಸಂದೇಶವನ್ನು ಕಳುಹಿಸಿದ್ದಾನೆ.
ಲಾಕ್ಡೌನ್ ಗೂ ಮುನ್ನ ಘಟನೆ ನಡೆದಿದ್ದು, ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ. ಒಂದು ಹುಡುಗಿಗಾಗಿ ಈ ರೀತಿಯ ಕ್ರೌರ್ಯಕ್ಕೆ ಮುಂದಾಗಿರುವ ಪುಡಿರೌಡಿಗಳ ಅಟ್ಟಹಾಸಕ್ಕೆ ಪೊಲೀಸರು ಬ್ರೇಕ್ ಹಾಕಬೇಕಿದೆ. ಬ್ರಹ್ಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.