ನವದೆಹಲಿ: ಟಿಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಾಪಂಚಾಯತ್ ಸಭೆಗೂ ಮುನ್ನವೇ ರೈತ ಆತ್ಮಹತ್ಯೆಗೆ ಶರಣಾಗಿದ್ದು, ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದೆ.
ಹರಿಯಾಣದ ಜಿಂದ್ ಜಿಲ್ಲೆಯ ಕರ್ಮವೀರ್ ಸಿಂಗ್ (52) ಆತ್ಮಹತ್ಯೆಗೆ ಶರಣಾದ ರೈತ. ಹರಿಯಾಣದ ಚರಕಿ ದಾದ್ರಿ ಮೈದಾನದಲ್ಲಿ ಈ ಘಟನೆ ನಡೆದಿದೆ. ಭಾರತ್ ಕಿಸಾನ್ ಯೂನಿಯನ್ ಜಿಂದಾಬಾದ್, ಸಮಸ್ಯೆ ಇತ್ಯರ್ಥಗೊಳಿಸದ ಮೋದಿ ಸರ್ಕಾರ ದಿನಾಂಕಗಳ ದಿನ ನೀಡುತ್ತಾ ಹೋಗುತ್ತಿದೆ. ಈ ಕಾನೂನುಗಳನ್ನ ಹಿಂಪಡೆಯುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಮೃತ ರೈತ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.
40 ಲಕ್ಷ ಟ್ರ್ಯಾಕ್ಟರ್: ಇತ್ತ ಮಹಾಪಂಚಾಯತ್ ನಲ್ಲಿ ಮಾತನಾಡಿದ ಭಾರತ್ ಕಿಸಾನ್ ಯೂನಿಯನ್ ಮುಂದಾಳು ರಾಕೇಶ್ ಟಿಕಾಯತ್, 2021ರ ರೈತ ಕ್ರಾಂತಿಗೆ ಕರೆ ಕೊಟ್ಟರು. ಜನವರಿ 26ರಂದು 20 ಸಾವಿರ ಟ್ರ್ಯಾಕ್ಟರ್ ಸೇರಿಸುವುದು ನಮ್ಮ ಗುರಿಯಾಗಿತ್ತು. ಆದ್ರೆ ಅನ್ನದಾತರು 2021ರ ಕಿಸಾನ್ ಕ್ರಾಂತಿಗೆ ಸಿದ್ಧರಾಗಬೇಕಿದೆ. ಈಗ 40 ಲಕ್ಷ ಟ್ರ್ಯಾಕ್ಟರ್ ಗಳ ರ್ಯಾಲಿ ನಡೆಸೋದು ನಮ್ಮ ಮುಂದಿನ ಗುರಿ ಎಂದು ಕರೆ ನೀಡಿದ್ದಾರೆ.