ಚಿತ್ರದುರ್ಗ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ ಮಹಾಮಾರಿಯಿಂದಾಗಿ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ತರಗತಿಯಲ್ಲಿ ಪಾಠ ಕೇಳಲಾಗದೇ ಪರೀಕ್ಷೆ ಹೇಗೆ ಬರೆಯೋದು ಎಂಬ ಆತಂಕದಲ್ಲಿದ್ದ ಗ್ರಾಮೀಣ ಪ್ರದೇಶದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದ ಪಬ್ಲಿಕ್ ಟಿವಿ ಕಾರ್ಯಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಎಸ್ಎಸ್ಎಲ್ಸಿ ಹಾಗೂ ಪಿಯು ಪರೀಕ್ಷೆ ಪೂರ್ವಸಿದ್ಧತಾ, ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಸಂವಾದದಲ್ಲಿ ಭಾಗಿಯಾಗಿದ್ದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಧುಗಿರಿ ಜಿಲ್ಲೆಗಳ ಡಿಡಿಪಿಐ, ಡಿಡಿಪಿಯು ಹಾಗೂ ಬಿಇಓಗಳೊಂದಿಗೆ ಚರ್ಚಿಸುವಾಗ ಪಬ್ಲಿಕ್ ಟಿವಿ ಸೇವೆಯನ್ನು ಮನಸಾರೆ ಸ್ಮರಿಸಿದ್ದಾರೆ.
ಮುಂಬರುವ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಪೂರಕವಾಗಿ ಸಹಕರಿಸಿದ ಸೇವಾ ಸಂಸ್ಥೆಗಳು ಹಾಗೂ ವಾಹಿನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಮೊಟ್ಟ ಮೊದಲನೆಯದಾಗಿ ಪಬ್ಲಿಕ್ ಟಿವಿ, ರೋಟರಿಕ್ಲಬ್ ಸಹಯೋಗದಲ್ಲಿ ನಡೆಯುತ್ತಿರುವ ಜ್ಞಾನದೀವಿಗೆ ಕಾರ್ಯಕ್ರಮವನ್ನು ನಾವು ಮರೆಯುವಂತಿಲ್ಲ. ಈ ಟ್ಯಾಬ್ ವಿತರಣೆ ಕಾರ್ಯಕ್ರಮ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಕೋವಿಡ್ ಭೀತಿಯಿಂದಾಗಿ ತರಗತಿಯಿಂದ ವಂಚಿತರಾಗಿ ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಹೀಗಾಗಿ ಪಬ್ಲಿಕ್ ಟಿವಿ ಕಾರ್ಯ ಶ್ಲಾಘನೀಯ ಎಂದು ಹೇಳಿದ್ದಾರೆ.