ಗದಗ: ದುಷ್ಕರ್ಮಿಗಳು ರೈತ ಬೆಳೆದ ಜೋಳದ ಬೆಳೆಗೆ ಬೆಂಕಿ ಇಟ್ಟು ಫಸಲು ನಾಶ ಮಾಡಿರುವ ಘಟನೆ ಗದಗದ ಲಕ್ಷ್ಮೇಶ್ವರ ತಾಲೂಕಿನ ಪುಟ್ಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ.
ಬಡ್ನಿ ಗ್ರಾಮದ ರೈತ ಭರಮಪ್ಪ ಕಾಂಬಳೆ ಅವರ ಬೆಳೆ ಹಾನಿಗೊಳಗಾಗಿದೆ. ಜೋಳದ ಫಸಲಿದ್ದ ಹೊಲಕ್ಕೆ ಬೆಂಕಿ ಬಿದ್ದ ಪರಿಣಾಮ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಕೈಗೆ ಬಂದಿರುವ ಬೆಳೆ ನಾಶವಾಗಿರುವ ಕುರಿತಾಗಿ ರೈತರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಿಳಿಜೋಳ ದುಷ್ಕರ್ಮಿಗಳ ಹೀನ ಕೃತ್ಯಕ್ಕೆ ಬೆಳೆಯಲ್ಲಾ ಸರ್ವನಾಶವಾಗಿದೆ. ವಾರದ ಹಿಂದಷ್ಟೇ ಅಕಾಲಿಕ ಮಳೆಗೆ ಜೋಳ ಬಿದ್ದು ಹಾಳಾಗಿತ್ತು. ಅಲ್ಪ-ಸ್ವಲ್ಪ ಉಳಿದ ಬೆಳೆ ಇನ್ನೇನು ಸಂಪೂರ್ಣ ಕಟಾವಿಗೆ ಬಂದಿತ್ತು. ಇನ್ನೊಂದು ವಾರದಲ್ಲಿ ಕಟಾವು ಮಾಡಬೇಕೆಂದುಕೊಂಡಿದ್ದರು. ಆದರೆ ಅಷ್ಟರಲ್ಲಿ ಬೆಂಕಿ ಬಿದ್ದು ಫಸಲು ನಾಶವಾಗಿದೆ. ಜಾನುವಾರುಗಳಿಗೂ ತಿನ್ನಲೂ ಬರದಂತೆ ಸುಟ್ಟುಕರಕಲಾಗಿದೆ. ಇದನ್ನು ಕಂಡ ಅನ್ನದಾತರ ಕಣ್ಣೀರು ಹಾಕುತ್ತಿದ್ದಾರೆ. ನೊಂದ ರೈತರಿಗೆ ಸರ್ಕಾರ ಪರಿಹಾರ ನೀಡಿ ಕೈಹಿಡಿದು ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.