– ವಿದ್ಯುತ್ ಕಣ್ಣಾಮುಚ್ಚಾಲೆಗೆ ಒಣಗುತ್ತಿರೋ ಬೆಳೆಗಳು
ಯಾದಗಿರಿ: ಜಿಲ್ಲೆಯ ರೈತರ ಪಾಡು ಹೇಳ ತೀರದಾಗಿದೆ. ಕೊರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳುವ ಹೊತ್ತಿನಲ್ಲಿಯೇ ಮಳೆ ಮತ್ತು ಭೀಮಾನದಿ ಪ್ರವಾಹ ಅನ್ನದಾತರ ಬದುಕನ್ನು ಕಸಿದುಕೊಳ್ಳುತ್ತಿದೆ. ಇಂತಹ ವೇಳೆಯಲ್ಲಿ ಜೆಸ್ಕಾಂ ಅಧಿಕಾರಿಗಳ ಚೆಲ್ಲಾಟ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಯಾದಗಿರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬೆಳೆಗಾಗಿ 7 ರಿಂದ 9 ಗಂಟೆ ಡಬಲ್ ಫೇಸ್ ವಿದ್ಯುತ್ ನೀಡಬೇಕು. ಆದರೆ ಜೆಸ್ಕಾಂ ಅಧಿಕಾರಿಗಳು ಕೆಲ ಭಾಗದಲ್ಲಿ ಕೇವಲ 4 ರಿಂದ 5 ತಾಸು ವಿದ್ಯುತ್ ನೀಡುತ್ತಿದ್ದಾರೆ. ಅದರಲ್ಲೂ ಸಹ ಸಿಂಗಲ್ ಫೇಸ್ ಗಂಟೆಗೆ ಒಂದು ಸಲ ವಿದ್ಯುತ್ ತೆಗೆದು ಹಾಕುತ್ತಿದ್ದು, ಇದು ಪಂಪ್ಸೆಟ್ ನಂಬಿಕೊಂಡಿರುವ ರೈತರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಜೆಸ್ಕಾಂ ಎಇ ಗಳಿಗ ನಿರ್ಲಕ್ಷ್ಯ ಧೋರಣೆಗೆ ರೈತಾಪಿ ವರ್ಗದಲ್ಲಿ ಅಸಮಾಧಾನ ಕೇಳಿ ಬರುತ್ತಿದೆ.
ಇನ್ನೂ ಯಾದಗಿರಿ ಜಿಲ್ಲೆಯ ಕೆಂಬಾವಿ ಜೆಸ್ಕಾಂ ಘಟಕದ ವ್ಯಾಪ್ತಿಗೆ ಒಳಪಡುವ ನಗನೂರ, ಗುಂಡಳ್ಳಿ, ಖಾನಾಪುರ ಎಸ್ ಕೆ, ಕಿರದಳ್ಳಿಯ ನೂರಾರು ರೈತರು ವಿದ್ಯುತ್ ನಂಬಿಕೊಂಡು ಹಲವಾರು ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಹಾಕಿದ್ದಾರೆ. ನಾಟಿ ಮಾಡಿರುವ ಬೆಳೆಯಲ್ಲಾ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಸಕಾಲಕ್ಕೆ ನೀರು ಸೀಗದೆ ಬೆಳೆ ಹಾಳಾಗುತ್ತಿದೆ. ಅದರಲ್ಲಿ ದ್ರಾಕ್ಷಿ ಬೆಳೆ ಪ್ರಮುಖವಾಗಿದೆ. ಅಲ್ಲದೆ ಜಿಲ್ಲೆಯ ಶಹಪುರ, ಸುರಪುರ, ಹುಣಸಗಿ, ವಡಗೇರಾ ಮತ್ತು ಗುರುಮಿಠಕಲ್ ಭಾಗದಲ್ಲಿ ಇದೇ ರೀತಿ ಪರಿಸ್ಥಿತಿಯಿದ್ದು, ಜಿಲ್ಲಾಡಳಿತ ಮಾತ್ರ ಜಾಣ ನಿದ್ದೆ ಜಾರಿದೆ.