ಹಾಸನ : ಸರ್ವಾಧಿಕಾರಿ ಧೋರಣೆಯಿಂದಾಗಿ ಹಾಸನ ಜೆಡಿಎಸ್ ಭದ್ರಕೋಟೆ ಎಂಬ ಬೇಲಿ ಕಳಚಿ ಬಿದ್ದಿದೆ ಎಂದು ಶಾಸಕ ಪ್ರೀತಂಗೌಡ ಪರೋಕ್ಷವಾಗಿ ಹೆಚ್ಡಿ ರೇವಣ್ಣ ವಿರುದ್ಧ ಠೀಕಾಪ್ರಹಾರ ನಡೆಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಮತದಾರರ ನೀರಿಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ, ಸಾಲಗಾಮೆ ಹೋಬಳಿಯ ಐದು ಪಂಚಾಯ್ತಿಗಳಲ್ಲಿ ಪ್ರತಿಸ್ಪರ್ಧಿ ಇಲ್ಲದೆ ಬಿಜೆಪಿ ಅಧಿಕಾರ ಹಿಡಿದಿದೆ. ಮೂವತ್ತು-ನಲವತ್ತು ವರ್ಷಗಳಿಂದ ಯಾವ ಪಕ್ಷಕ್ಕೂ ಸಿಗದ ಅಧಿಕಾರ ಈಗ ಬಿಜೆಪಿ ಪಕ್ಷಕ್ಕೆ ದೊರೆತಿದೆ ಎಂದು ಹೇಳಿದರು.
ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಜಯ ಸಿಕ್ಕಿದೆ. ಐದು ಪಂಚಾಯತಿಗಳಲ್ಲಿ ಒಂದು ಪಂಚಾಯತಿಯಲ್ಲೂ ಪ್ರತಿಸ್ಪರ್ಧಿಯೇ ಇಲ್ಲ, ಜೆಡಿಎಸ್ ಒಬ್ಬರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಸದ ಪರಿಸ್ಥಿತಿ ಜೆಡಿಎಸ್ಗೆ ಬಂದಿದೆ. ಸಾಲಗಾಮೆ ಹೋಬಳಿಯ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಜಿಲ್ಲೆಯ ಹೆಡ್ ಕ್ವಾರ್ಟರ್ ಹಾಸನದಲ್ಲಿ ಬಿಜೆಪಿ ಗೆದ್ದಿರುವುದು ಆಕಸ್ಮಿಕ, ಪ್ರೀತಂಗೌಡ ಆಕಸ್ಮಿಕ ಶಾಸಕ, ಇನ್ನು ಕೂಸು ಎಂದು ಮಾಜಿ ಸಚಿವ ರೇವಣ್ಣ ಜರೆದಿದ್ದರು. ಸಾಲಗಾಮೆ ಜನತೆ ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಹಾಸನ ಜೆಡಿಎಸ್ ಭದ್ರಕೋಟೆ ಎಂದು ಬೇಲಿ ಹಾಕಿಕೊಂಡಿದ್ದರು. ಅದು ಈಗ ಕಳಚಿ ಬಿದ್ದಿದೆ. ಜೆಡಿಎಸ್ ಪಕ್ಷದವರು ಸರ್ವಾಧಿಕಾರಿ ಧೋರಣೆ ತೋರಿದ್ದರು. ನಾವು ಇದೇ ರೀತಿ ಮಾಡಿದರೆ ಮುಂದೆ ನಮಗೂ ಅದೇ ಪರಿಸ್ಥಿತಿ ಬರುತ್ತದೆ. ಹಾಗಾಗಿ ಜನರ ಅಪೇಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.