ಮಂಡ್ಯ: ಮೊನ್ನೆ ತನಕ ಜೆಡಿಎಸ್ ಎಲ್ಲಿದೆ, ಜೆಡಿಎಸ್ ಜೊತೆ ಹೋಗಲೇ ಬಾರದು ಎಂದು ಹೇಳುತ್ತಿದ್ದರು. ಈಗ ಗೊತ್ತಾಯಿತಾ ಸಿದ್ದರಾಮಯ್ಯನವರೇ ಜೆಡಿಎಸ್ ಶಕ್ತಿ ಎಂದು ಮಾಜಿ ಸಚಿವ ಸಾರಾ ಮಹೇಶ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಪಾಂಡವಪುರದ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಪಹಾಸ್ಯ ಮಾಡಿದ್ದಾರೆ. ಜೆಡಿಎಸ್ ಎಲ್ಲಿದೆ ಎಂದು ಮೊನ್ನೆ ತನಕ ಹೇಳುತ್ತಿದ್ದರು. ಜೆಡಿಎಸ್ ಜೊತೆ ಹೋಗಲೇ ಬಾರದು ಎನ್ನುತ್ತಿದ್ದರು. ಈಗ ನಾವು ಬೇಡ ಎಂದರೂ ಮೈಸೂರು ಪಾಲಿಕೆಯಲ್ಲಿ ಓಟ್ ಹಾಕಿದರು. ಈಗ ಗೊತ್ತಾಯಿತಾ ಸಿದ್ದರಾಮಯ್ಯನವರೇ ಜೆಡಿಎಸ್ ಶಕ್ತಿ ಏನು ಅಂತ. ಇದು ಪ್ರಾದೇಶಿಕ ಪಕ್ಷದ ಶಕ್ತಿ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.
ನೀವು ಇಲ್ಲಿಯವರೆಗೆ ಯಾವುದೇ ಅಧಿಕಾರ ಪಡೆದಿದ್ದರೂ ಜೆಡಿಎಸ್ ನಾಯಕರ ಮತ್ತು ಕಾರ್ಯಕರ್ತರ ಆಶೀರ್ವಾದದಿಂದ ಎನ್ನುವುದನ್ನು ಮರೆಯಬೇಡಿ. ಇವತ್ತಿನ ಮೈಸೂರು ನಗರ ಪಾಲಿಕೆಯ ಸಂದೇಶ 2023ರ ರಾಜ್ಯದ ಸಂದೇಶ. ಈ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಎಷ್ಟೇ ಬಲಿಷ್ಠವಾಗಿ ಇದ್ದರೂ, ಇಂದಿನ ಮೈಸೂರು ನಗರ ಪಾಲಿಕೆಯ ಸಂದೇಶವೇ 2023ರ ಸಂದೇಶ. ಅಂದು ನಮ್ಮೆಲ್ಲರ ನಾಯಕ ಕುಮಾರಸ್ವಾಮಿಯವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.