ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಒಳ ಜಗಳವನ್ನು ಪ್ರಸ್ತಾಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಳೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಜೆಡಿಎಸ್ ಬಿತ್ತಿದ ಬೀಜ ಕರ್ನಾಟಕ ಕಾಂಗ್ರೆಸ್ನಲ್ಲಿ ಬೆಳೆಯುತ್ತಿದೆ. ಇದು ಬೆಳೆ ಅಲ್ಲ, ಕಳೆ ಎಂದು ಡಿಕೆ ಶಿವಕುಮಾರ್ ಅವರಿಗೆ ಈಗ ಅರಿವಾಗುತ್ತಿದೆ. ಈ ಕಳೆ ಎಂಬ ಸಿದ್ದರಾಮಯ್ಯ ಅವರನ್ನು ಬೇರು ಸಮೇತ ಕಿತ್ತು ಹಾಕಲು ಮೂಲ ಕಾಂಗ್ರೆಸ್ಸಿಗರು ಪಣ ತೊಟ್ಟಿದ್ದಾರೆ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ. ಈ ಟ್ವೀಟ್ಗೆ #DksVsSiddu ಹ್ಯಾಷ್ ಟ್ಯಾಗ್ ಬಳಸಿದೆ.
ಬಿಜೆಪಿ ನಡೆಸುತ್ತಿರುವ ಬಿಎಸ್ವೈಮುಕ್ತ ಬಿಜೆಪಿ ಅಭಿಯಾನದ ಮುಖವಾಣಿ ಬಸನಗೌಡ ಪಾಟೀಲ್ ಯತ್ನಾಳ್. ನಳಿನ್ ಕುಮಾರ್ ಕಟೀಲ್ ಅವರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದೆ ಮಜಾ ಅನುಭವಿಸುತ್ತ ನೋಡಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಬಿಜೆಪಿ ಕರ್ನಾಟಕ ಕೇವಲ ಒಡೆದ ಮನೆಯಲ್ಲ, ಛಿದ್ರಗೊಂಡು ಜೋಡಿಸಲಾಗದ ಮಡಿಕೆ. ಇವರ ಸಿಡಿ ಸರ್ಕಾರದ ಕಿತ್ತಾಟದಲ್ಲಿ ರಾಜ್ಯ ಅನಾಥವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಇನ್ನೊಂದು ಟ್ವೀಟ್ ಮಾಡಿ ಬಿಜೆಪಿ, ವಲಸೆ ನಾಯಕ ಸಿದ್ದರಾಮಯ್ಯ ಅವರು ಸಂತ್ರಸ್ತ ಶಾಸಕ ಅಖಂಡ ಪರವಾಗಿ ನಿಂತರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಲಭೆಯ ಆರೋಪಿ ಸಂಪತ್ ರಾಜ್ ಪರವಾಗಿ ನಿಂತರು. ಇವರಿಬ್ಬರ ನಡುವಿನ ಸಂಘರ್ಷದಿಂದ ದಲಿತ ಶಾಸಕನಿಗೆ ಅನ್ಯಾಯವಾಗಿದೆ. ಕರ್ನಾಟಕ ಕಾಂಗ್ರೆಸ್ ಗಲಭೆಯ ಆರೋಪಿಗೆ ಬಹಿರಂಗ ಬೆಂಬಲ ನೀಡಿದೆ ಎಂದು ಟೀಕಿಸಿದೆ.