ಮಡಿಕೇರಿ: ಕೊರೊನಾದಿಂದಾಗಿ ಇನ್ನೂ ಶಾಲೆಗಳು ಆರಂಭವಾಗಿಲ್ಲ. ಜುಲೈನಿಂದಾದರೂ ಆರಂಭ ಮಾಡುವುದು ಒಳ್ಳೆಯದು ಎಂದು ಮೈಸೂರು ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಹೇಳಿದರು.
ಕೊಡಗಿನ ಜಂಬೂರಿನಲ್ಲಿ 2018ರ ಪ್ರವಾಹ ಸಂತ್ರಸ್ಥರಿಗೆ ನಿರ್ಮಾಣವಾಗಿರುವ ಮನೆಗಳ ಹಸ್ತಾಂತರ ಮಾಡುವ ಕಾರ್ಯಕ್ರಮದ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೋವಿಡ್ ಟೆಸ್ಟ್ ಮಾಡಿ ಬಳಿಕ ಜುಲೈ ತಿಂಗಳಲ್ಲಿ ಶಾಲೆ ಪ್ರಾರಂಭಿಸುವಂತಾಗಬೇಕು. ಆನ್ ಲೈನ್ ಮೂಲಕ ಎಲ್ಲವನ್ನೂ ಕಲಿಸಲು ಸಾಧ್ಯವಿಲ್ಲ. ಶಾಲೆಯಲ್ಲಿ ಕಲಿಯುವ ರೀತಿಯೇ ಬೇರೆ. ಅಲ್ಲಿ ಕಲಿಯುವ ಶಿಸ್ತು ಎಲ್ಲವನ್ನೂ ಆನ್ಲೈನ್ ನಲ್ಲಿ ಸಾಧ್ಯವೇ ಇಲ್ಲ ಎಂದರು.
ಅಷ್ಟಕ್ಕೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ನಲ್ಲಿ ಕಲಿಯುವುದಕ್ಕೆ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಗಳು ಇರುವುದಿಲ್ಲ. ಇದರಿಂದ ಆ ಮಕ್ಕಳ ಕಲಿಕೆಗೆ ಸಮಸ್ಯೆ ಎದುರಾಗುತ್ತದೆ. ಈಗ ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ಟೆಸ್ಟ್ ಕೇಂದ್ರಗಳಿರುವುದರಿಂದ ಅಲ್ಲಿಯೇ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮತ್ತು ಪೋಷಕರ ಕೋವಿಡ್ ಟೆಸ್ಟ್ ಮಾಡಿ ಜುಲೈನಲ್ಲಿ ಶಾಲೆ ಆರಂಭಿಸುವಂತೆ ಆಗಬೇಕು ಎಂದರು.