ಮೈಸೂರು: ಲಸಿಕೆಯನ್ನು ನೀಡುತ್ತಿರುವುದರಲ್ಲಿಯೇ ರಾಜ್ಯದಲ್ಲಿ ಮೈಸೂರು ಜಿಲ್ಲೆಯು ಮೊದಲ ಸ್ಥಾನದಲ್ಲಿದ್ದು, ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಮಂಗಳವಾರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಲಸಿಕೆಯನ್ನು ಶೇ.100ರಷ್ಟು ನೀಡಬೇಕು. 21ರಿಂದ ಎಲ್ಲಾ ವರ್ಗದವರಿಗೂ ನೀಡಲು ಘೋಷಣೆಯಾಗಿರುವುದರಿಂದ ಆದಷ್ಟು ಬೇಗ ಲಸಿಕೆ ಎಲ್ಲಾ ವರ್ಗದವರಿಗೂ ಸಿಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಈ ಸಮಯದಲ್ಲಿ ಕಷ್ಟದಲ್ಲಿದ್ದವರಿಗೆ ನೆರವಾಗುವುದೇ ದೇವರ ಕಾರ್ಯ: ಆರ್.ಅಶೋಕ್
ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಬಹಳ ಉಪಯುಕ್ತವಾಗಿದ್ದು, ಮೊದಲ ಹಂತ ಪೂರ್ಣಗೊಂಡಿದ್ದು, ಎರಡನೇ ಹಂತಕ್ಕೆ ಮುಖ್ಯಮಂತ್ರಿಗಳು ಅನುಮತಿ ಕೊಟ್ಟ ನಂತರ ಬಹುತೇಕ ಎಲ್ಲಕಡೆ ಹೋಗುತ್ತಿರುವುದರಿಂದ ಟೆಸ್ಟ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ವಾರದಲ್ಲಿಯೇ ಎರಡನೇ ಹಂತವು ಮುಕ್ತಯವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಹಣಕಾಸು ಸ್ಥಿತಿಯ ಏನೇ ಇದ್ದರೂ, ಬಿ.ಪಿ.ಎಲ್ ಕಾರ್ಡ್ಹೊಂದಿದ ಕುಟುಂಬದ ಸದಸ್ಯರು ಕೋವಿಡ್ ನಿಂದ ನಿಧನವಾದರೆ ಅಂತಹ ಕುಟುಂಬಕ್ಕೆ ಒಂದು ಲಕ್ಷ ಪರಿಹಾರಧನ ನೀಡಲು ತೀರ್ಮಾನಿಸಲಾಗಿದೆ. ಇಂತಹ ಕಷ್ಟ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಈ ದಿಟ್ಟ ನಿರ್ಧಾರವನ್ನು ಸ್ವಾಗತಿಸುವುದಾಗಿ ಹಾಗೂ ಅಭಿನಂದಿಸುವುದಾಗಿ ತಿಳಿಸಿದರು.