ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವರು ಹದಿನೈದು ದಿನಗಳೊಳಗೆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ರಾಯಚೂರು ಜನತೆ ಪರವಾಗಿ ಸೀರೆ, ಬಳೆಗಳನ್ನು ಉಡುಗೊರೆ ನೀಡುತ್ತೇವೆ ಅಂತ ಜಿಲ್ಲಾ ಜೆಡಿಎಸ್ ಎಚ್ಚರಿಸಿದೆ. ನಾಳೆ ಕಲ್ಯಾಣ ಕರ್ನಾಟಕ ದಿನಾಚರಣೆಗೆ ಬರುವ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿಗೆ ಘೇರಾವ್ ಹಾಕಲಾಗುವುದು ಅಂತ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ ಹೇಳಿದ್ದಾರೆ.
ಜಿಲ್ಲೆಯ ಹಾಳಾದ ರಸ್ತೆಗಳನ್ನ ಅಭಿವೃದ್ಧಿ ಪಡಿಸದಿದ್ದರೆ ಸಚಿವರು ಹಾಗೂ ಶಾಸಕರಿಗೆ ಜಿಲ್ಲಾ ಜೆಡಿಎಸ್ ನಿಂದ ರೇಷ್ಮೆ ಸೀರೆ, ಬಳೆ ಉಡುಗೊರೆ ನೀಡಲಾಗುವುದು ಅಂತ ತಿಳಿಸಿದ್ದಾರೆ. ಸಚಿವ ಲಕ್ಷ್ಮಣ ಸವದಿ ಕೇವಲ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿ ಪರ್ಸೇಂಟೇಜ್ ಪಡೆದುಕೊಂಡು ಹೋಗುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.
ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್ ನಗರದ ರಸ್ತೆ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿಸಿದ್ದಾರೆ. ಆದರೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಅಲ್ಪಸಂಖ್ಯಾತರು ಹೆಚ್ಚು ಇರುವ ವಾರ್ಡುಗಳಲ್ಲಿ ಕಡಿಮೆ ಅನುದಾನ ನೀಡಿದ್ದಾರೆ. ನಗರದ ರಸ್ತೆ ಅಭಿವೃದ್ಧಿಗಾಗಿ 56 ಕೋಟಿ ರೂಪಾಯಿ ಯೋಜನೆಯಲ್ಲಿ ಭ್ರಷ್ಟಾಚಾರವಾಗಿದೆ ಅಂತ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿರುಪಾಕ್ಷಿ ಆರೋಪಿಸಿದ್ದಾರೆ.