– ಸುಮಾರು 1,500ಕ್ಕಿಂತ ಹೆಚ್ಚು ಟವರ್ ಗಳಿಗೆ ಹಾನಿ
ನವದೆಹಲಿ: ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ನೂತನ ಕೃಷಿ ಕಾನೂನು ವಿರುದ್ಧ ಪಂಜಾಬ್ ಹಾಗೂ ಹರಿಯಾಣದ ರೈತರು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ರಿಲಯನ್ಸ್ ಜಿಯೋ ಟೆಲಿಕಾಂ ಟವರ್ಗಳಿಗೆ ರೈತರು ಹಾನಿ ಮಾಡುತ್ತಿದ್ದಾರೆ. ಹೀಗಾಗಿ ಕಂಪನಿಯ ಆಸ್ತಿ ಮತ್ತು ಸೇವೆಗಳನ್ನು ಕಾಪಾಡಲು ಸಹಾಯಕ್ಕಾಗಿ ಸರ್ಕಾರದ ಹಸ್ತಕ್ಷೇಪ ಕೋರಿ ರಿಲಯನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಪಂಜಾಬ್ ಹಾಗೂ ಹರಿಯಾಣದ ರೈತರು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ನ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವ, ಟೆಲಿಕಾಂ ಕೇಬಲ್ಗಳನ್ನು ಕತ್ತರಿಸುವ ಮತ್ತು ಜಿಯೋ ಮೂಲ ಸೌಕರ್ಯಗಳಿಗೆ ಹಾನಿ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಲಯನ್ಸ್ ಜಿಯೋನ 9,000 ಟೆಲಿಕಾಂ ಟವರ್ಗಳಲ್ಲಿ 1,500ಕ್ಕೂ ಹೆಚ್ಚು ಟವರ್ಗಳು ಡಿಸೆಂಬರ್ನಿಂದ ಕಾರ್ಯನಿರ್ವವಹಿಸುತ್ತಿಲ್ಲ. ವಿದ್ಯುತ್ ಸ್ಥಗಿತ ಗೊಳಿಸುವ ಮತ್ತು ಜನರೇಟರ್ಗಳ ಕಳ್ಳತನದಿಂದ ಟವರ್ಗೆ ಹಾನಿ ಮಾಡಲಾಗಿದೆ ಎಂದು ರಿಲಯನ್ಸ್ ಸಂಸ್ಥೆ ತಿಳಿಸಿದೆ. ಈ ಮೊದಲು ಇದೇ ವಿಚಾರವಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ರವರೆಗೆ ಇಂತಹ ವಿದ್ವಂಸಕ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಕಠಿಣ ಎಚ್ಚರಿಕೆ ನೀಡಿದ್ದು, ಇಂತಹ ಪ್ರಕರಣಗಳಲ್ಲಿ ಪೊಲೀಸರು ಕಠಿಣ ಕ್ರಮ ಜರುಗಿಸಬೇಕೆಂದು ಸೂಚಿಸಿದ್ದರು.
ರಿಲಯನ್ಸ್ ಜಿಯೋ ಇನ್ಫೋಕಾಮ್ ಇದೀಗ ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್ ಮೊರೆ ಹೋಗಿದೆ. ದುಷ್ಕರ್ಮಿಗಳು ನಡೆಸಿದ ಅಕ್ರಮ ವಿಧ್ವಂಸಕ ಕೃತ್ಯಗಳಿಗೆ ಸಂಪೂರ್ಣ ನಿಲುಗಡೆ ತರಲು ಸರ್ಕಾರದ ತುರ್ತು ಹಸ್ತಕ್ಷೇಪ ಕೋರಿ ಆರ್ಐಎಲ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹಿಂಸಾಚಾರ ಘಟನೆಯು ಸಾವಿರಾರು ಉದ್ಯೋಗಿಗಳ ಜೀವನದ ಮೇಲೆ ಪರಿಣಾಮವನ್ನುಂಟು ಮಾಡಿದೆ. ಅಲ್ಲದೆ ಎರಡು ರಾಜ್ಯಗಳ ನಡೆಸುತ್ತಿರುವ ಪ್ರಮುಖ ಸಂವಹನ ಮೂಲಸೌಕರ್ಯ, ಮಾರಾಟ, ಸೇವಾ ಮಳಿಗಳಿಗೆ ಮೇಲೆ ಹಾನಿ ಹಾಗೂ ಅಡ್ಡ ಪರಿಣಾಮವನ್ನುಂಟು ಮಾಡಿದೆ ಎಂದು ತಿಳಿಸಿದರು.