ಚಿಕ್ಕಮಗಳೂರು: ಗಲಭೆಯನ್ನು ಸಹಿಸುವುದಿಲ್ಲ ಬೆಂಗಳೂರು ಗಲಭೆಗೆ ಯಾರೇ ಕಾರಣಕರ್ತರಾದರೂ ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಆಗ್ರಹಿಸಿದ್ದಾರೆ.
ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು ಅತ್ಯಂತ ಕಠಿಣ ಹಾಗೂ ತೀವ್ರ ಪದಗಳಿಂದ ಖಂಡಿಸುತ್ತೇನೆ. ಯಾವುದೇ ಜಾತಿ-ಧರ್ಮ ಇರುಬಹುದು. ಯಾವುದೇ ಧಾರ್ಮಿಕ ನಂಬಿಕೆ ಹಾಗೂ ಗುರುಗಳ ಮೇಲೆ ಹಗುರುವಾದ ಹೇಳಿಕೆಗಳನ್ನ ಕೊಡುವುದನ್ನ ಮೊದಲು ಎಲ್ಲ ಸಮುದಾಯದವರು ನಿಲ್ಲಿಸಬೇಕು. ಆಗ ಮಾತ್ರ ಈ ರೀತಿಯ ಭಾವನಾತ್ಮಕ ಘಟನೆಗಳು ನಡೆಯುವುದಿಲ್ಲ ಎಂದರು.
ಈ ಘಟನೆ ತಪ್ಪು. ನ್ಯಾಯ ಕೇಳಲು ಕೋರ್ಟ್, ಕಾನೂನು, ಪೊಲೀಸ್ ವ್ಯವಸ್ಥೆ ಇದೆ. ದೂರು ನೀಡಿ ನ್ಯಾಯ ಕೇಳಬೇಕು. ಈ ರೀತಿ ದೌರ್ಜನ್ಯ, ಗಲಭೆ ಒಳ್ಳೆಯದಲ್ಲ ಇದನ್ನ ಯಾರೂ ಸಹಿಸಲ್ಲ. ಇದನ್ನು ಯಾರೂ ಒಪ್ಪುವುದಿಲ್ಲ. ಯಾರೋ ಶಾಸಕರ ಸಂಬಂಧಿ ಏನೋ ಹೇಳಿಕೆ ಕೊಟ್ಟನೆಂದು ದಾಂದಲೆ ತರವಲ್ಲ ಎಂದು ಗಲಭೆಕೋರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಘಟನೆ ಕುರಿತು ಸರ್ಕಾರ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಹೇಳಿಕೆ ಕೊಟ್ಟವನ ಮೇಲೂ ಕ್ರಮವಾಗಬೇಕು ಎಂದಿದ್ದಾರೆ. ಇಂತಹ ಘಟನೆಯಲ್ಲಿ ಅಮಾಯಕರಿಗೆ ಹೊಡೆತ ಬೀಳುತ್ತೆ. ಆದ್ದರಿಂದ ಗಲಭೆಗೆ ಕಾರಣಕರ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.