ಹುಬ್ಬಳ್ಳಿ: ಅವಳಿ ನಗರದ ಹೋಟೆಲ್ ಹಾಗೂ ವಿವಿಧ ತಿಂಡಿ ತಿನಿಸು ತಯಾರಿಕಾ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಾರ್ಖಂಡ್ ಮೂಲದ 69 ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಬಸ್ ವ್ಯವಸ್ಥೆ ಕಲ್ಪಿಸಿ ಇಂದು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.
ರಾಜ್ಯ ಸರ್ಕಾರದಿಂದ ವಲಸೆ ಕಾರ್ಮಿಕರಿಗೆ ಉಚಿತವಾಗಿ ಅವರ ರಾಜ್ಯಗಳಿಗೆ ತರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಬೆಂಗಳೂರಿನಿಂದ ವಿಶೇಷ ಶ್ರಮಿಕ್ ಎಕ್ಸ್ ಪ್ರಸ್ ರೈಲಿನ ಮೂಲಕ ಜಾರ್ಖಂಡ್ಗೆ ಇವರು ತೆರಳಲಿದ್ದಾರೆ. ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಬೆಳಗಿನ ಉಪಹಾರವನ್ನು ನೀಡಿ, ಮಾಸ್ಕ ಹಾಗೂ ಸ್ಯಾನಿಟೈಜರ್ ವಿತರಿಸಲಾಗಿದೆ. ಜೊತೆಗೆ ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಪ್ರತಿ ಬಸ್ಸಿನಲ್ಲಿ 23 ರಿಂದ 24 ಜನರಂತೆ ಒಟ್ಟು 3 ವಾಯುವ್ಯ ಕರ್ನಾಟಕ ಬಸ್ಗಳಲ್ಲಿ ಇವರನ್ನು ಸಾಮಾಜಿಕ ಅಂತರದೊಂದಿಗೆ ಕೂರಿಸಿ ಕಳುಹಿಸಿಕೊಡಲಾಗಿದೆ.
ಮಧ್ಯಹ್ನಾದ ಊಟ ಹಾಗೂ ನೀರಿನ ವವ್ಯಸ್ಥೆ ಕೂಡ ಮಾಡಲಾಗಿದೆ. ಪ್ರತಿ ಬಸ್ಸಿನಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಬೆಂಗಳೂರಿನಿಂದ ಇವರನ್ನು ಜಾರ್ಖಂಡ್ಗೆ ಕಳುಹಿಸುವ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತ್ತಮ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರುಗಳಾದ ಅಕ್ರಂ, ಅಶೋಕ್ ಒಡಯರ್, ಸಾರಿಗೆ ಇಲಾಖೆಯ ಐ.ಜಿ.ಮಗಾಮಿ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.